ಮುಖ್ಯಮಂತ್ರಿ ಕೃಷ್ಣರಿಂದಸಾರ್ವಜನಿಕರ ಧರ್ಮದರ್ಶನ ಕಾರ್ಯಕ್ರಮ
ಬೆಂಗಳೂರು : ಹಿಂದೆ ರಾಜ ಮಹಾರಾಜರು ಪ್ರಜೆಗಳ ಕುಂದು ಕೊರತೆ ವಿಚಾರಿಸಲು ಅರಮನೆಯ ಪ್ರವೇಶ ದ್ವಾರದಲ್ಲಿ ನ್ಯಾಯದ ಗಂಟೆ ಕಟ್ಟುತ್ತಿದ್ದರಂತೆ. ನ್ಯಾಯ ಕೋರಿ ಗಂಟೆ ಬಾರಿಸುವವರನ್ನು ಭೇಟಿ ಮಾಡಿ, ಪರಿಹಾರ ಸೂಚಿಸುತ್ತಿದ್ದರಂತೆ. ಇದು ಪ್ರಜಾಪ್ರಭುತ್ವ. ಪ್ರಜೆಗಳೇ ಪ್ರಭುಗಳು. ಈ ಪ್ರಜೆಗಳ ಪ್ರತಿನಿಧಿಗಳನ್ನು ಜನಸಾಮಾನ್ಯರು ಕಾಣಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ.
ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಧರ್ಮದರ್ಶನದ ಕಾರ್ಯಕ್ರಮ ನಡೆಸುವುದು ಹೊಸ ವಿಷಯವೇನಲ್ಲ. ಈಗ ಹೈಟೆಕ್ ಮುಖ್ಯಮಂತ್ರಿ ಕೃಷ್ಣ ಕೂಡ ಜನಸಾಮಾನ್ಯರನ್ನು ಧರ್ಮದರ್ಶನ ಸಮಯದಲ್ಲಿ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಹಿಂದಿನ ಕೆಲವು ಮುಖ್ಯಮಂತ್ರಿಗಳೂ ಮುಖ್ಯವಾಗಿ ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ ಈ ರೀತಿಯ ಧರ್ಮದರ್ಶನ ದಯಪಾಲಿಸಿದ್ದರು.
ತಮ್ಮ ಹಿರಿಯರ ಹಾದಿಯಲ್ಲಿ ಈಗ ಮುಖ್ಯಮಂತ್ರಿ ಕೃಷ್ಣ ಅವರು ಹೆಜ್ಜೆ ಇಡ ತೊಡಗಿದ್ದಾರೆ. ಸರ್ಕಾರಿ ರಜಾ ದಿನ ಮತ್ತು ಭಾನುವಾರಗಳನ್ನು ಹೊರತು ಪಡಿಸಿ, ಉಳಿದಂತೆ ತಮ್ಮ ಅಧಿಕೃತ ನಿವಾಸ ಕೃಷ್ಣಾ ದಲ್ಲಿ ಬೆಳಗ್ಗೆ 9ರಿಂದ 9-30ರವರೆಗೆ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ. ಅಂತೆಯೇ ಪ್ರತಿದಿನ 9.30ರಿಂದ 10.30ರವರೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಾಲಯದ ಪತ್ರಿಕಾ ಪ್ರಕಟಣೆ ಈ ವಿಷಯ ತಿಳಿಸಿದೆ.
ನೀವೂ ದೊರೆತನಕ ದೂರು ಕೊಂಡೊಯ್ಯಬೇಕೆ? ನಿಮ್ಮ ಕುಂದು ಕೊರತೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಹೇಳಿಕೊಳ್ಳಬೇಕೇ? ಹಾಗಾದರೆ, ತಡವೇಕೆ, ಧರ್ಮದರ್ಶನ ಪಡೆಯಲು ಸಿದ್ಧರಾಗಿ.