28ರಂದು ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ
ಬೆಂಗಳೂರು : ಇದೇ ತಿಂಗಳ 28ರಂದು ರಾಜ್ಯದ 147 ಸ್ಥಳೀಯ ಸಂಸ್ಥೆಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ, ಇನ್ನು 6 ವಾರದೊಳಗೆ ಸಂವಿಧಾನಬದ್ಧವಾಗಿ ವಾರ್ಡ್ಗಳ ಸರದಿ ಮೀಸಲಾತಿಯನ್ನು ನಿರ್ಧರಿಸುವ ಮಾನದಂಡಗಳನ್ನು ನಿರ್ಧರಿಸಿ, ಹೊಸದಾಗಿ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಈಗಾಗಲೇ ವಾರ್ಡ್ಗಳ ಮೀಸಲಾತಿ ನಿಗದಿ ಮಾಡಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ವಾಪಸು ಪಡೆಯಲಾಗುವುದು ಎಂದು ನಗರಾಭಿವೃದ್ಧಿ ಸಚಿವಾಲಯದ ಪರವಾಗಿ ಅಡ್ವೋಕೇಟ್ ಜನರಲ್ ಕೋರ್ಟ್ಗೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದರು.
ಆದರೆ, ವಿವಿಧ ವರ್ಗಗಳಿಗೆ ವಾರ್ಡ್ಗಳಲ್ಲಿ ಸರದಿ ಮೀಸಲಾತಿ ನಿರ್ಧರಿಸಲು ಅಗತ್ಯವಾದ ಮಾನದಂಡ ಸಿದ್ಧಪಡಿಸಲು ಕನಿಷ್ಠ ನಾಲ್ಕು ತಿಂಗಳ ಕಾಲ ಕಾಲಾವಕಾಶ ಕೇಳಿದ ಅಡ್ವೋಕೇಟ್ ಜನರಲ್ ಎ.ಎನ್. ಜಯರಾಂ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು ಕೇವಲ ಆರು ವಾರಗಳ ಕಾಲಾವಕಾಶ ನೀಡಿದರು.
ಚುನಾಯಿತ ಪ್ರತಿನಿಧಿಗಳಿಲ್ಲದೆ ಸ್ಥಳೀಯ ಸಂಸ್ಥೆಗಳನ್ನು ದೀರ್ಘಾವಧಿ ಕಾಲದವರೆಗೆ ಖಾಲಿ ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧುವಲ್ಲ ಎಂದು ನ್ಯಾಯಮೂರ್ತಿಗಳಾದ ಜಿ.ಸಿ. ಭರೂಕ ಹಾಗೂ ಕೆ. ಶ್ರೀಧರರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ವಾರ್ಡ್ ಮೀಸಲಾತಿಗೆ ಅನುಸರಿಸಿದ ಮಾನದಂಡಗಳನ್ನು ತಿಳಿಸಿ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದ ಬಗ್ಗೆ ವಿಭಾಗೀಯ ಪೀಠ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದೆ.