ಬಂಟ್ವಾಳ : ಸೀಮಂತದ ಊಟ ಮಾಡಿದ 160 ಮಂದಿ ಆಸ್ಪತ್ರೆಗೆ
ಮಂಗಳೂರು : ಬಂಟ್ವಾಳದ ಹೊಟೇಲ್ ಒಂದರಲ್ಲಿ ಸೀಮಂತದ ಊಟ ಮಾಡಿದ 160ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ. ಬಿ.ಸಿ. ರೋಡ್ನ ಹೊಟೆಲ್ ಚಿಕೋರಿಯಲ್ಲಿ ಬುಧವಾರ ಮಧ್ನಾಹ್ನ ಏರ್ಪಡಿಸಲಾಗಿದ್ದ ಸೀಮಂತದ ಊಟದಲ್ಲಿ 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಭರ್ಜರಿ ಮಾಂಸದ ಊಟ ಮಾಡಿದ ಸುಮಾರು 160ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 65 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಕನಾಡಿ, ಕುಪ್ಪೆಪದವು, ಪುತ್ತೂರು, ದೇರಳಕಟ್ಟೆ, ಬಂಟ್ವಾಳ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ.
ಲೈಸೆನ್ಸ್ ಅಮಾನತು : ಔತಣ ಕೂಟ ಏರ್ಪಡಿಸಿದ್ದ ವಿಶ್ವನಾಥ ರೈ ಅವರು ಬಂಟ್ವಾಳ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಕಾರ್ಯ ಪ್ರವೃತ್ತರಾದ ಬಂಟ್ವಾಳ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶ ಪಡೆದು, ಚಿಕೋರಿ ಬಾರ್ಅಂಡ್ ರೆಸ್ಟೋರೆಂಟ್ನ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ. ಹಾಲಿ ಹೋಟೆಲ್ ಅನ್ನು ಮುಚ್ಚಲಾಗಿದೆ.
ಹಳಸಿದ ಮಾಂಸ ಕಾರಣ : ಪ್ರಾಥಮಿಕ ವರದಿಗಳ ರೀತ್ಯ ಹಲವು ದಿನಗಳ ಹಿಂದೆಯೇ ಕತ್ತರಿಸಿದ್ದ ಕೋಳಿಯ ಮಾಂಸವನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟು , ಬುಧವಾರ ಆ ಮಾಂಸದಿಂದ ಅಡಿಗೆ ಮಾಡಿದ್ದೇ ಆಹಾರ ವಿಷಯುಕ್ತವಾಗಲು ಕಾರಣ ಎನ್ನಲಾಗಿದೆ. ಈ ಖಾದ್ಯವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ತುಮಕೂರು ವರದಿ : ತುಮಕೂರಿನ ಸೋಮೇಶ್ವರ ಬಡಾವಣೆಯ ಬಿ.ಸಿ.ಎಂ. ವಿದ್ಯಾರ್ಥಿ ನಿಲಯದಲ್ಲಿ ಹೊಸ ವರ್ಷದ ಆಚರಣೆಗಾಗಿ ಮಾಡಿದ ಒಬ್ಬಟ್ಟು ತಿಂದ ಸುಮಾರು 31 ಮಂದಿ ವಿದ್ಯಾರ್ಥಿನಿಯರು ವಾಂದಿ - ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು.
ಹಿರೇಕೆರೂರು ವರದಿ : ತಾಲೂಕಿನ ರಟ್ಟಿ ಹಳ್ಳಿಯಲ್ಲಿ ಬುಧವಾರ ವಿಷಪೂರಿತ ಆಹಾರ ಸೇವಿಸಿದ ನೂರಾರು ಮಕ್ಕಳು ಅಸ್ವಸ್ಥರಾಗಿರುವ ಘಟನೆಯೂ ವರದಿಯಾಗಿದೆ. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಂಡಳ ಪೂಜೆ ಪ್ರಯುಕ್ತ ನಡೆದ ಅನ್ನ ಸಂತರ್ಪಣೆ ಯಲ್ಲಿ ಊಟ ಮಾಡಿದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಅಸ್ವಸ್ಥರಾದರು. ಎಲ್ಲ ಮಕ್ಕಳನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.