ಎಲ್ಟಿಟಿಇ ನಿಷೇಧ ರದ್ದು ಪಡಿಸಲು ನೆಡುಮಾರನ್ ಆಗ್ರಹ
ತಿರುಚನಾಪಲ್ಲಿ : ಬೆಂಗಳೂರಿನಲ್ಲಿ ನೆಡುಮಾರನ್ರ ಸನ್ಮಾನದ ಗಳಿಗೆ ಹತ್ತಿರವಾಗುತ್ತಿದ್ದಂತೆ ಪರ ವಿರೋಧದ ಕಾವು ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬೆನ್ನಿನಲ್ಲೇ, ಎಲ್ಟಿಟಿಇ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು ಎಂದು ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಉಭಯ ರಾಜ್ಯ ಸರ್ಕಾರಗಳು ಕ್ಷಮಾದಾನ ನೀಡಲು ಮುಂದಾದಲ್ಲಿ ತಾವು ವೀರಪ್ಪನ್ ಶರಣಾಗತಿಗೆ ಪ್ರಯತ್ನ ನಡೆಸುವುದಾಗಿ ಹೇಳಿದರು. ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎನ್ನುವ ತಮ್ಮ ನಿಲುವನ್ನು ಅವರು ಪುನರುಚ್ಚರಿಸಿದ ಅವರು, ಕಾರ್ಯಾಚರಣೆಯ ವಿರುದ್ಧ ಉಭಯ ರಾಜ್ಯಗಳ ಜನಾಂದೋಲನ ಸಂಘಟಿಸುವುದಾಗಿ ಹೇಳಿಕೊಂಡರು.
ರಾಜ್ ಬಿಡುಗಡೆ ಸಂದರ್ಭದಲ್ಲಿ ವೀರಪ್ಪನ್ ಮಂಡಿಸಿದ್ದ ಕೆಲವು ಬೇಡಿಕೆಗಳನ್ನು ಈಡೇರಿಸಲು ಉಭಯ ರಾಜ್ಯ ಸರ್ಕಾರಗಳು ಈಗಾಗಲೇ ಒಪ್ಪಿಕೊಂಡಿವೆ. ಟಾಡಾ ಬಂಧಿಗಳ ಬಿಡುಗಡೆ ಸೇರಿದಂತೆ ಕೆಲವು ಬೇಡಿಕೆಗಳು ಮಾತ್ರ ಕಾನೂನು ತೊಡಕಿನಿಂದ ಬಾಕಿಯುಳಿದಿವೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಏರ್ಪಾಡಾಗಿರುವ ಸನ್ಮಾನ ಕಾರ್ಯಕ್ರಮ ಪೂರ್ವಯೋಜನೆಯಂತೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ ನೆಡುಮಾರನ್, ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ಅವರನ್ನು ಭೇಟಿ ಮಾಡುವ ಯಾವುದೇ ಯೋಜನೆ ತಮ್ಮ ಮುಂದಿಲ್ಲ ಎಂದರು.
(ಯುಎನ್ಐ)
ಮುಖಪುಟ / ವೀರಪ್ಪನ್ ಶಿಕಾರಿ