ವಿದೇಶಿ ವಿವಿ ಹಾವಳಿಯಲ್ಲಿ ದೇಶೀ ವಿವಿಗಳ ರಕ್ಷಣೆಗೆ ಯುಜಿಸಿ
ಮೈಸೂರು : ವಿದೇಶೀ ವಿಶ್ವ ವಿದ್ಯಾಲಯಗಳ ಹಾವಳಿ ತಪ್ಪಿಸಿ, ನಮ್ಮ ದೇಶದ ವಿವಿಗಳಲ್ಲೇ ಸುಧಾರಣೆ ತರುವ ನಿಟ್ಟಿನಲ್ಲಿ ಹೊಸ ಮಸೂದೆ ಸಿದ್ಧವಾಗುತ್ತಿದೆ ಎಂದು ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ದ ಅಧ್ಯಕ್ಷ ಡಾ.ಹರಿ ಗೌತಮ್ ಶುಕ್ರವಾರ ತಿಳಿಸಿದ್ದಾರೆ.
ಮೈಸೂರು ವಿಶ್ವ ವಿದ್ಯಾಲಯದ 81ನೇ ಘಟಿಕೋತ್ಸವದಲ್ಲಿ ಅವರು ಮಾತಾಡುತ್ತಿದ್ದರು. ಜಾಗತೀಕರಣ ವಿದೇಶೀ ವಿಶ್ವ ವಿದ್ಯಾಲಯಗಳನ್ನು ನಮ್ಮ ದೇಶಕ್ಕೆ ಕರೆ ತಂದಿದೆ. ಇದು ನಮ್ಮ ದೇಶದ ಶಿಕ್ಷಣ ಮಟ್ಟ ಸುಧಾರಣೆಗೆ ಸವಾಲೊಡ್ಡಿದೆ. ಒಂದೆಡೆ ನಿಸ್ತೇಜವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ಕಳೆ ತುಂಬಬೇಕು. ಮತ್ತೊಂದೆಡೆ ವಿದೇಶೀ ವಿಶ್ವ ವಿದ್ಯಾಲಯಗಳ ಹಾವಳಿಗೆ ಮಸೂದೆ ಮೂಲಕ ಅಥವಾ ಪಕ್ಕಾ ನಿಬಂಧನೆಗಳ ಮೂಲಕ ಕಡಿವಾಣ ಹಾಕಬೇಕು ಎಂದರು.
ಸ್ವ- ಆರ್ಥಿಕ ದೇಶೀ ವಿಶ್ವ ವಿದ್ಯಾಲಯಗಳು ಹೆಚ್ಚಾಗಿ ತಲೆ ಎತ್ತಬೇಕು. ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ವಿಶ್ವ ವಿದ್ಯಾಲಯ ಕೇಂದ್ರಗಳನ್ನು ಸ್ಥಾಪಿಸುವ ಸಾಮರ್ಥ್ಯವಿರುವ ಸಂಸ್ಥೆಗಳಿಗೆ ತಕ್ಕ ನೆರವು ಕೊಡಬೇಕು. ಯುಜಿಸಿ ಇದಕ್ಕೆ ಬದ್ಧವಾಗಿದ್ದು, ಈ ಕುರಿತಂತೆ ಹೆಜ್ಜೆ ಡಲಾರಂಭಿಸಿದೆ ಎಂದು ಹೇಳಿದರು.
ಯುಜಿಸಿಯ ಪರಿಣತ ಸಮಿತಿ ಸಲ್ಲಿಸಿರುವ ವರದಿಯನ್ವಯ, ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಬೋಧನಾ ಮಟ್ಟ ಇನ್ನೂ ಕೆಳ ಮಟ್ಟದಲ್ಲೇ ಇದೆ. ಕುಲಪತಿಯೂ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ನೌಕರರೂ ಇದಕ್ಕೆ ಹೊಣೆಗಾರರಾಗುತ್ತಾರೆ. ಶಿಸ್ತು ಕಾಪಾಡಿಕೊಂಡು, ವಿದ್ಯಾರ್ಥಿಗಳಿಗೆ ಜೀರ್ಣವಾಗುವಂತೆ ಪಾಠ ಮಾಡಬೇಕಾದುದು ಬಹು ಮುಖ್ಯ. ಪ್ರಸ್ತುತ ವಿವಿಗಳ ಪಠ್ಯಕ್ರಮ, ಕಾರ್ಯಕ್ರಮಗಳ ವಿವರಗಳನ್ನು ಯುಜಿಸಿ ಪಡೆಯುತ್ತಿದೆ. ಮುಂದೆ ಅದರಲ್ಲಿ ಯಾವ ರೀತಿ ಸುಧಾರಣೆ ತರಬೇಕೆಂಬುದನ್ನು ಪರಿಶೀಲಿಸಿ, ಕ್ಷಿಪ್ರ ಗತಿಯಲ್ಲಿ ಸುಧಾರಣೆಯತ್ತ ಗಮನ ಹರಿಸಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವ್ಯಾಜ್ಯಗಳ ಸಮಿತಿ ಕೊಟ್ಟಿರುವ ಮಹತ್ವವಾದ ತೀರ್ಪಿನಿಂದ ವಿವಿಯಲ್ಲಿ ಸಲ್ಲಿಸುವುದು ಅತ್ಯಮೂಲ್ಯ ಸೇವೆ. ಯುಜಿಸಿಯ ನಿಯಮ, ಕಟ್ಟಳೆಗಳನ್ನು ಯಾವುದೇ ವಿವಿ ಮರೆತಲ್ಲಿ, ಅದರ ವಿರುದ್ಧ ಗ್ರಾಹಕ ಕೋರ್ಟಿಗೆ ಜನ ಸಾಮಾನ್ಯರು ದೂರು ಕೊಡಬಹುದಾಗಿದೆ. ಇದನ್ನು ಎಲ್ಲಾ ವಿವಿಗಳೂ ಗಮನದಲ್ಲಿಡಬೇಕು ಎಂದು ಎಚ್ಚರಿಸಿದರು.
ವಿಜ್ಞಾನ ವಿಷಯದಲ್ಲಿ ಆಸಕ್ತ ರಾಗಿದ್ದು, ಸಂಶೋಧನೆ ಮಾಡಬಯಸುವ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಕೊಡಲು ಯುಜಿಸಿ ನಿರ್ಧರಿಸಿದೆ ಎಂದರು.