ರಾಜ್ಯಪಾಲರ ಟೇಬಲ್ಲಿನತ್ತ ಆಸ್ತಿ ವಿವರ ಕೊಡದ 68 ಶಾಸಕರ ಪಟ್ಟಿ
ಬೆಂಗಳೂರು : ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸದ ಮೂವರು ಮಂತ್ರಿಗಳು, ವಿರೋಧ ಪಕ್ಷದ ಸದಸ್ಯರೂ ಸೇರಿದಂತೆ ವಿಧಾನಸಭೆಯ 68 ಶಾಸಕರ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸಲಿದೆ.
ಸಚಿವ ಸಂಪುಟ ಸಭೆಯ ನಂತರ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್ ಈ ವಿಷಯ ತಿಳಿಸಿದರು. ಮುಂದೆ ಇಂಥ ಘಟನೆ ನಡೆದರೆ ತಕ್ಕ ಶಾಸ್ತಿ ಮಾಡಲು ಆಸ್ತಿ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತರುವ ಬಗೆಗೂ ಸರ್ಕಾರ ಚಿಂತಿಸುತ್ತಿದೆ. 1999- 2000ನೇ ಸಾಲಿನ ತಮ್ಮ ಆಸ್ತಿ ವಿವರ ಸಲ್ಲಿಸದ ಮಂತ್ರಿ ಮಹೋದಯರೆಂದರೆ- ಎಸ್.ಆರ್.ಕಾಶಪ್ಪನವರ್, ಎಂ.ದಿವಾಕರ ಬಾಬು ಹಾಗೂ ರಮಾನಾಥ ರೈ. ವಿಧಾನ ಸಭಾ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಕೂಡ ವಿವರ ಕೊಟ್ಟಿಲ್ಲ. ವಿವಿಧ ಮಂಡಲಿ ಹಾಗೂ ನಿಗಮಗಳ 9 ಮಾಜಿ ಅಧ್ಯಕ್ಷರ ಹೆಸರುಗಳೂ ಪಟ್ಟಿಯಲ್ಲಿವೆ ಎಂದು ಸಚಿವರು ಹೇಳಿದರು.
ಕಳೆದ ವರ್ಷ ಆಗಸ್ಟ್ 29ರಂದು ಆಸ್ತಿ ವಿವರ ಸಲ್ಲಿಸದವರ ಪಟ್ಟಿಯನ್ನು ಲೋಕಾಯುಕ್ತ ಸರ್ಕಾರಕ್ಕೆ ಕಳುಹಿಸಿದೆ. ಹೊಟ್ಟೆ ಪಕ್ಷದ ರಂಗಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಸ್ಪಂದಿಸಿ ಲೋಕಾಯುಕ್ತ ಈ ಕ್ರಮ ಕೈಗೊಂಡಿತ್ತು. ವಿಧಾನಸಭೆಯಲ್ಲಿ ಈ ಬಗೆಗೆ ವರದಿ ಜಾಹೀರಾಗುವ ಮುನ್ನ ರಾಜ್ಯಪಾಲರ ಅನುಮತಿ ಪಡೆಯಬೇಕಾದುದು ಕಡ್ಡಾಯ. ಆಸ್ತಿ ವಿವರ ಸಲ್ಲಿಸದವರ ಸಂಬಳ ಹಾಗೂ ವಿವಿಧ ಭತ್ಯೆಗಳನ್ನು ರದ್ದು ಪಡಿಸಬಹುದಾಗಿದೆ ಎಂದು ಸಚಿವರು ಪ್ರಶ್ನೆಗಳಿಗೆ ಉತ್ತರಿಸಿದರು.
ಕೊಳಗೇರಿಗಳಿಗೆ ಚರಂಡಿ, ಬೀದಿದೀಪ : ರಾಜ್ಯದ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 21 ಮೊದಲ ದರ್ಜೆ ನಗರಗಳಲ್ಲಿನ ಕೊಳಗೇರಿಗಳ ಸಮಸ್ಯೆ ತೊಡೆದೋಡಿಸಲು 274 ಕೋಟಿ ರುಪಾಯಿ ವೆಚ್ಚದಲ್ಲಿ ನಿವೇಶನ ಅಭಿವೃದ್ಧಿ ಯೋಜನೆಯನ್ನು ಪರಿಚಯಿಸಲೂ ಸಚಿವ ಸಂಪುಟ ತೀರ್ಮಾನಿಸಿದೆ. ಉತ್ತಮ ಚರಂಡಿ ವ್ಯವಸ್ಥೆ, ಬೀದಿ ದೀಪ ಹಾಗೂ ಕುಡಿಯುವ ನೀರಿನ ಯೋಜನೆ, ಬಹೋಪಯೋಗಿ ಸಮುದಾಯ ಭವನಗಳ ನಿರ್ಮಾಣವೂ ಇದರಲ್ಲಿ ಸೇರಿವೆ. ಇಡೀ ಯೋಜನೆಗೆ ಹುಡ್ಕೋ ಶೇ. 80ರಷ್ಟು ನೆರವು ನೀಡಲಿದೆ. ಸುಮಾರು 14 ಲಕ್ಷ ಮಂದಿ ಯೋಜನೆಯ ಉಪಯೋಗ ಪಡೆಯಲಿದ್ದಾರೆ ಎಂದು ಚಂದ್ರಶೇಖರ್ ವಿವರಿಸಿದರು.
(ಯುಎನ್ಐ)