ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರಮ್ಮನ ಹಟ್ಟಿಗೂ ಕಂಪ್ಯೂಟರ್‌ ಬಂತು ಕಣಾ!

By Staff
|
Google Oneindia Kannada News

*ಪಿ. ಜಯರಾಂ

ನವದೆಹಲಿ : boramma ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಗಳ ಜನರ ಸತಮತ ಜೀವನಕ್ಕೀಗ ಐಟಿ ಮೆರುಗು. ಕೇವಲ ನಗರದ ಜನರ ಕೈಗೆ ಮಾತ್ರ ಸಿಕ್ಕುತ್ತಿರುವ ಕಂಪ್ಯೂಟರ್‌ ಮೌಸು ಈಗ ದೇಶದ ಸುಮಾರು 60 ಲಕ್ಷ ಹಳ್ಳಿಗಳ ಜನರಿಗೂ ಪರೋಕ್ಷವಾಗಿ ಎಟುಕಲಿದೆ !

ಹಿಮಾಚಲ ಪ್ರದೇಶದಲ್ಲಿ ಲಾಹುಲ್‌ ಸ್ಪಿತಿ ಎಂಬೊಂದು ಕುಗ್ರಾಮ. ಅಲ್ಲಿ ವರ್ಷದ ಸುಮಾರು ಅರ್ಧ ಕಾಲ ಧೋ ಎಂದು ಹಿಮ ಮಳೆಗರೆಯುತ್ತದೆ. ಡಜನ್ನುಗಟ್ಟಲೆ ಜನ ಸಾವಿನ ಬಾಯಿಗೆ ತುತ್ತಾಗುತ್ತಾರೆ. ಅಲ್ಲೊಂದು ಚಿಕ್ಕ ಆಸ್ಪತ್ರೆ. ಅದರಲ್ಲಿ ಒಂದಿದ್ದರೆ ಒಂದಿಲ್ಲ. ವೈದ್ಯ ಎಕ್ಸ್‌ಪರ್ಟಂತೂ ಅಲ್ಲವೇ ಅಲ್ಲ. ಆದರೆ, ಈಗ ಅಲ್ಲೊಂದು ಕಂಪ್ಯೂಟರ್‌ ಇದೆ. ಅಲ್ಲಿನ ವೈದ್ಯರು ತಮಗೆ ಗೊತ್ತಾಗದ್ದನ್ನ ಕಂಪ್ಯೂಟರ್‌ ಮೂಲಕವೇ ಬೇರೆ ದೊಡ್ಡ ವೈದ್ಯರಿಂದ ತಿಳಿಯುತ್ತಾರೆ. ರಾಜಧಾನಿ ಸಿಮ್ಲಾದ ಮುಖ್ಯ ಸರ್ಕಾರಿ ಆಸ್ಪತ್ರೆ- ಲಾಹುಲ್‌ ಸ್ಪಿತಿ ಆಸ್ಪತ್ರೆಗೆ ಕಂಪ್ಯೂಟರ್‌ ಈಗ ಸಂಪರ್ಕದ ಕೊಂಡಿ. ಈ ಬದಲಾವಣೆ ಕಳೆದ ಒಂದೆರಡು ತಿಂಗಳಲ್ಲಿ 3 ಜೀವ ಉಳಿಸಿದೆ.

ಮಾಹಿತಿ ತಂತ್ರಜ್ಞಾನ ಹಳ್ಳಿಗಳ ಮೂಲಭೂತ ಸಮಸ್ಯೆಗಳನ್ನು ಹೇಗೆ ನಿವಾರಿಸಬಲ್ಲುದು ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಲಾಢ್ಯ ರಾಷ್ಟ್ರವಾಗುತ್ತದೆ ಅಂತ ಹೇಳುತ್ತಿರುವುದೂ ಇದೇ ಕಾರಣಕ್ಕೆ. ನ್ಯಾಷನಲ್‌ ಅಸೋಸಿಯೇಶನ್‌ ಆಫ್‌ ಸಾಫ್ಟ್‌ವೇರ್‌ ಅಂಡ್‌ ಸರ್ವಿಸ್‌ ಕಂಪನೀಸ್‌ (ನಾಸ್‌ಕಾಮ್‌) ಅಧ್ಯಕ್ಷ ದೇವಾಂಗ್‌ ಮೆಹ್ತಾ , ದಕ್ಷಿಣ ಏಷ್ಯಾದ ವಿದೇಶೀ ಪ್ರತಿನಿಧಿಗಳ ಸಂಘದ ಸದಸ್ಯರಿಗೆ ಭಾರತದ ಮಾಹಿತಿ ತಂತ್ರಜ್ಞಾನ ಸಾಮರ್ಥ್ಯ- ಸಾಧನೆ- ಧ್ಯೇಯಗಳನ್ನು ಬುಧವಾರ ವಿವರಿಸಿದ್ದು ಹೀಗೆ.

ಅವರ ಮಾತು ಹೀಗೆ ಮುಂದುವರೆಯಿತು....

ಮಧ್ಯಪ್ರದೇಶದಲ್ಲಿ ಕೊಳಗೇರಿಗೂ ಅತ್ತತ್ತ ಎಂಬಂಥ ಸುಮಾರು ಹಳ್ಳಿಗಳಿವೆ. ರಾಜಧಾನಿ ಭೋಪಾಲದಿಂದ ಹಳ್ಳಿ ಹಾದಿ ತುಳಿಯಲು ಒಲ್ಲೆ ಎನ್ನುವ ಶಿಕ್ಷಕರೇ ಹೆಚ್ಚು. ಈಗ ತೀರಾ ಹಿಂದುಳಿದ 12 ಹಳ್ಳಿಗಳ ಪ್ರತಿ ಶಾಲೆಯಲ್ಲಿ ಒಂದೊಂದು ಟಿವಿ ಇದೆ. ಭೋಪಾಲದಲ್ಲಿ ಕುಳಿತ ಶಿಕ್ಷಕರೇ ಟಿವಿ ಚಾನೆಲ್‌ ಮೂಲಕ ಹಳ್ಳಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ !

ಶಿಕ್ಷಣಕ್ಕೆ ಸಂಬಂಧಿಸಿದಂತೆ ದೇಶದ ಹಳ್ಳಿಗಳಲ್ಲಿ ಮಾಹಿತಿ ತಂತ್ರಜ್ಞಾನ ಬಳಸುವ ಸರ್ಕಾರದ ಯೋಜನೆಗಳಿಗೆ ಕೆಲವು ನಿವೃತ್ತ ಭೂಸೇನಾಧಿಕಾರಿಗಳೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ಮಾಹಿತಿ ತಂತ್ರಜ್ಞಾನ ಸಮುದಾಯ ಕೇಂದ್ರಗಳನ್ನು ತೆರೆಯಬೇಕೆಂಬುದು ಸರ್ಕಾರದ ಉದ್ದೇಶ. ಇಂಥ ಯೋಜನೆಗಳಲ್ಲಿ ಆಸಕ್ತರಾಗಿರುವ ಸುಮಾರು 20 ಸಾವಿರ ಯೋಧರು ಪ್ರತಿ ವರ್ಷ ಸೇನಾ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಲೋಕಸಭೆಯ 545 ಸದಸ್ಯರ ಪೈಕಿ 300 ಸದಸ್ಯರು ಸರ್ಕಾರದ 2 ಕೋಟಿ ರುಪಾಯಿ ನೆರವಿನಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಐಟಿ ಕೇಂದ್ರಗಳನ್ನು ತೆರೆಯುವುದರಲ್ಲಿ ಆಸಕ್ತಿ ತೋರಿಸಿದ್ದಾರೆ. ನಾಸ್‌ಕಾಮ್‌ ಈ ಕುರಿತ ಪ್ರಸ್ತಾವನೆಯನ್ನು ಪ್ರತಿ ಲೋಕಸಭಾ ಸದಸ್ಯರ ಗಮನಕ್ಕೆ ತಂದಿದೆ. ಚಿಂದ್ವಾರ, ಛತ್ತೀಸಗಢ, ನಾಗಪುರ ಹಾಗೂ ಕೊಯಮತ್ತೂರಿನಲ್ಲಿ ಇಂಥ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಹೆಂಗಸರಿಗೂ ಮಾಹಿತಿ ತಂತ್ರಜ್ಞಾನ ಮುಟ್ಟಿಸುವ ಉದ್ದೇಶದಿಂದ 17 ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್‌ನೆಟ್‌ನಲ್ಲಿ ಮಾಹಿತಿ ಕೊಡುವ ಬಗೆಗೂ ನಾಸ್‌ಕಾಮ್‌ ಯೋಚಿಸುತ್ತಿದೆ. ಹಳ್ಳಿ ಹಳ್ಳಿಗೂ ಐಟಿ ಜ್ಞಾನ ಹರಡುವ ನಿಟ್ಟಿನಲ್ಲಿ ಎದುರಾಗುತ್ತಿರುವ ತೊಂದರೆಗಳೆಂದರೆ- ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಅತಿ ಕಡಿಮೆ ಬ್ಯಾಂಡ್‌ ವಿಡ್ತ್‌. ನಮ್ಮಲ್ಲಿ ಪ್ರತಿ ವರ್ಷ 1 ಲಕ್ಷದ 78 ಸಾವಿರ ಕಂಪ್ಯೂಟರ್‌ ಎಂಜಿನಿಯರ್‌ಗಳು ಹುಟ್ಟಿಕೊಳ್ಳುತ್ತಿದ್ದಾರೆ. 2008ರ ಹೊತ್ತಿಗೆ 87 ಬಿಲಿಯನ್‌ ಡಾಲರ್‌ ಮೌಲ್ಯದ ಸಾಫ್ಟ್‌ವೇರ್‌ ರಫ್ತಿನ ಗುರಿಯಿಟ್ಟು ಕೊಂಡಿದ್ದೇವೆ. ಇದಷ್ಟೇ ಸಾಲದು. ಮೊದಲು ಬಹು ವರ್ಷಗಳಿಂದ ಹಿಂದುಳಿದಿರುವ ನಾವು ನಮ್ಮ ಮೂಲಭೂತ ಸಮಸ್ಯೆಗಳನ್ನು ಐಟಿ ಅಸ್ತ್ರದಿಂದ ಪರಿಹರಿಸಿಕೊಳ್ಳಬೇಕಿದೆ.

ಮಾಹಿತಿ ತಂತ್ರಜ್ಞಾನ ಬಡ ಬೋರೇಗೌಡನಿಗೂ ಮುಟ್ಟಿ , ಅವನ ಜೀವನವೂ ಹಸನಾಗಬೇಕಿದೆ. ಹಾಗಾದರೆ ಮಾತ್ರ ಭಾರತ ಬಲಾಢ್ಯ ರಾಷ್ಟ್ರವಾಗಲಿಕ್ಕೆ ಸಾಧ್ಯ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X