ಹತ್ತು ದಿನದ ನಂತರ ಆನೆ ಹೊಟ್ಟೆಯಿಂದ ಹೊರಬಂದ ಬೀಗದ ಕೈ
ಮೈಸೂರು : ಕೊಳ್ಳೇಗಾಲ ಮೂಲದ ದಂಪತಿ ಮಲೆ ಮಹದೇಶ್ವರ ದರ್ಶನಕ್ಕೆಂದು ಡಿ.25ರಂದು ಬೆಟ್ಟಕ್ಕೆ ಹೋಗಿದ್ದರು. ಪೂಜಾ ನಂತರ ಬೆಟ್ಟ ಹತ್ತಿ ಸುಸ್ತಾಗಿದ್ದ ದಂಪತಿ, ತೆಂಗಿನಕಾಯಿ, ಬಾಳೆಹಣ್ಣು, ಪ್ರಸಾದದ ಜತೆ ತಮ್ಮ ಮನೆಯ ಬೀಗದ ಕೈಗಳಿದ್ದ ಗೊಂಚಲನ್ನೂ ಕಟ್ಟೆಯ ಮೇಲಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು.
ಅಲ್ಲೇ ಪಕ್ಕದಲ್ಲಿ ಗಜ ಗಾಂಭೀರ್ಯದಿಂದ ಹೋಗುತ್ತಿದ್ದ ದೇವಾಲಯದ ಗಜರಾಜ, ತನ್ನ ಸೊಂಡಿಲನ್ನೊಮ್ಮೆ ಪ್ರಸಾದದ ಚೀಲದತ್ತ ತಿರುಗಿಸಿ, ಕೀಬಂಚ್ ಸಹಿತವಾಗಿ ಹಣ್ಣು, ತೆಂಗಿನಕಾಯನ್ನೇಲ್ಲಾ ಗುಳುಂ ಮಾಡಿಬಿಟ್ಟ. ತೆಂಗಿನಕಾಯಿ, ಬಾಳೆ ಹಣ್ಣು ತಿಂದಿದ್ದರೆ ಪರವಾಗಿರಲಿಲ್ಲ, ಮನೆಯ ಬೀಗದ ಕೈ ಇಲ್ಲದೆ, ಊರಿಗೆ ಹೋಗುವುದಾದರೂ ಎಂತು? ಬಾಗಿಲು ತೆಗೆಯುವುದಾದರೂ ಎಂತು.
ವಿಧಿ ಇಲ್ಲದೆ ದಂಪತಿ ಬೆಟ್ಟದಲ್ಲೇ ಒಂದು ದಿನ ಪೂರ್ತಿ ಉಳಿದರು. ಆನೆ ಲದ್ದಿಯಲ್ಲಿ ತಮ್ಮ ಮನೆಯ ಕೀಲಿ ಕೈ ಏನಾದರೂ ಬಂದೀತೇ ಎಂದು ಕಾದರು. ಪ್ರಯೋಜನ ಆಗದಿದ್ದಾಗ, ಬಂದದಾರಿಗೆ ಸುಂಕ ಇಲ್ಲ ಎಂದು ಊರಿಗೆ ಹೊರಟರು. ಹಾಗೇ ಹೋಗಲಿಲ್ಲ ಹೋಗುವ ಮುನ್ನ, ದೇವಾಲಯದ ಆನೆ ತಮ್ಮ ಮನೆ ಬೀಗದ ಕೈ ಕದ್ದಿದೆ ಎಂದು ದೂರೂ ನೀಡಿದರು.
ಪಾಪ, ಪೊಲೀಸರು ತಾನೆ ಏನು ಮಾಡುತ್ತಾರೆ. ಕಳ್ಳ ಆನೆಯನ್ನು ಬಂಧಿಸಿದರೆ, ಅದಕ್ಕಾಗೇ ಒಂದು ದೊಡ್ಡ ಸೆರೆಮನೆ ಕಟ್ಟಿಸಬೇಕಾಗಿ ಬರುತ್ತದೆ. ಇನ್ನು ಅದಕ್ಕೆ ಊಟ ಹಾಕುವುದಾದರೂ ಹೇಗೆ? ಅವರೂ ಸುಮ್ಮನಾದರು, ದಂಪತಿ ಊರಿಗೆ ಹೊರಟರು. ಇದಾದ ಹತ್ತು ದಿನಗಳ ಬಳಿಕ ಗುರುವಾರ ಆನೆ ಹಾಕಿದ ಲದ್ದಿಯಲ್ಲಿ ಬೀಗದ ಕೈ ಗೊಂಚಲು ಹೊರಬಂತು. ಅಂತೂ ಈಗ ಆನೆ ಕಳ್ಳತನದ ಆರೋಪದಿಂದ ಮುಕ್ತವಾಯ್ತು.