ಮುಂದಿನ 20 ವರ್ಷದಲ್ಲಿ ಹಸಿವು, ಬಡತನದಿಂದಮುಕ್ತವಾಗಲಿದೆ ಭಾರತ
ನವದೆಹಲಿ : ದೇಶದ ವೈಜ್ಞಾನಿಕ ಪ್ರಗತಿಯ ಜತೆಗೆ ಸ್ವದೇಶೀ ಯುಕ್ತಿ, ಜ್ಞಾನ ಹಾಗೂ ವಿಶಿಷ್ಟ ಸಾಮಾಜಿಕ ಪರಂಪರೆ ಮೇಳೈಸಿರುವ ಹಿನ್ನೆಲೆಯಲ್ಲಿ 2020ನೇ ಇಸವಿಯ ಒಳಗೆ ಭಾರತ ಬಡತನ, ಹಸಿವು, ಪೌಷ್ಟಿಕತೆಯ ಕೊರತೆಯಿಂದ ಮುಕ್ತವಾಗಿ, ಮುಂದುವರಿಯುತ್ತಿರುವ ರಾಷ್ಟ್ರಕ್ಕೆ ಮಾದರಿಯಾಗಲಿದೆ. ಈ ವಿಷಯವನ್ನು 88ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಬಿಡುಗಡೆ ಮಾಡಿರುವ ದೂರದೃಷ್ಟಿ ವರದಿಯಲ್ಲಿ ತಿಳಿಸಲಾಗಿದೆ.
ದೇಶವು ಆಹಾರ ಸ್ವಾವಲಂಬನೆ ಸಾಧಿಸಲು ಕೃಷಿ ಕ್ಷೇತ್ರದೊಂದಿಗೆ ಉದ್ಯಮ, ಆರೋಗ್ಯ, ಶಿಕ್ಷಣ ರಂಗಗಳು ಕೂಡ ಮಹತ್ವದ ಪಾತ್ರ ವಹಿಸಲಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ತೋಟಗಾರಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ವಿಜ್ಞಾನ ಮತ್ತು ತಂತ್ರಜ್ಞಾನ, ಸಂಘಟನೆ ಹಾಗೂ ಸಾರ್ವಜನಿಕ ನೀತಿಗೆ ಪ್ರಾಧಾನ್ಯತೆ ನೀಡಬೇಕು ಎಂಬ ಅಂಶಗಳೂ ವರದಿಯಲ್ಲಿ ಅಡಕವಾಗಿವೆ.
ಆರ್ಥಿಕ ನೆರವು: ವೈಜ್ಞಾನಿಕ ಸಂಶೋಧನೆಗೆ ಹೆಚ್ಚಿನ ಹಣಕಾಸು ನೆರವು, ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ವೈಚಾರಿಕ ಪರಿವರ್ತನೆಗೆ ಒತ್ತು ನೀಡುವುದಾಗಿ ಪ್ರಧಾನಿ ವಿಜ್ಞಾನಿಗಳ ಸಮುದಾಯಕ್ಕೆ ಭರವಸೆ ನೀಡಿದ್ದಾರೆ. ಪೊಖ್ರಾನ್ನಲ್ಲಿ ಅಣು ಬಾಂಬ್ ಪರೀಕ್ಷಾರ್ಥ ಪ್ರಯೋಗ ನಡೆದಾಗ ಜೈಜವಾನ್ - ಜೈ ಕಿಸಾನ್ ಜತೆ ಜೈ ವಿಜ್ಞಾನ್ ಎಂಬ ಪದ ಸೇರಿಸಿದ್ದ ಪ್ರಧಾನಿ ವಾಜಪೇಯಿ ಅವರು ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಇತರ ದೇಶಗಳಿಗಿಂತಲೂ ಮುಂದಕ್ಕೆ ಕೊಂಡೊಯ್ಯುವಂತೆ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.
ಇಲ್ಲಿ ಬುಧವಾರ ಆರಂಭಗೊಂಡ 88ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಅವರು ಮಾತನಾಡುತ್ತಿದ್ದರು. ಜಾಗತಿಕ ಸ್ಪರ್ಧೆಯ ನಡುವೆ ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮುಂದಾಗಬೇಕೆಂದೂ ಅವರು ಹೇಳಿದ್ದಾರೆ.
ಸಾಫ್ಟ್ವೇರ್ ಬೇಡಿಕೆ ಬಗ್ಗೆ ಕಳವಳ : ತಾಂತ್ರಿಕ ಸಿಬ್ಬಂದಿಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಬೆಸೆಯಲು ತಾಂತ್ರಿಕ ಶಿಕ್ಷಣದ ರಾಷ್ಟ್ರೀಯ ಮಂಡಳಿಯನ್ನು ರಚಿಸಲಾಗುವುದು ಎಂದೂ ಅವರು ಹೇಳಿದರು. ಭಾರತದ ಸಾಫ್ಟ್ವೇರ್ ತಂತ್ರಜ್ಞರಿಗೆ ದೇಶದಲ್ಲಿ ಹಾಗೂ ವಿದೇಶದಲ್ಲಿ ಭಾರಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ, ಉನ್ನತ ಅಧ್ಯಯನ, ಸಂಶೋಧನೆಯನ್ನು ಕೈಬಿಟ್ಟು ಸಾಫ್ಟ್ವೇರ್ನತ್ತಲೇ ವಾಲುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಈ ಹಂತದಲ್ಲೇ ಇದನ್ನು ಹತ್ತಿಕ್ಕಿ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡದಿದ್ದರೆ, ಮುಂದೆ ಉತ್ತಮ ದರ್ಜೆಯ ಶಿಕ್ಷಕರು, ವಿಜ್ಞಾನ ಸಂಶೋಧಕರ ಕೊರತೆಯನ್ನು ರಾಷ್ಟ್ರ ಎದುರಿಸಬೇಕಾಗುತ್ತದೆ ಎಂದೂ ಅವರು ತಮ್ಮ ಸಮಸ್ರಮಾನದ ಭಾಷಣದಲ್ಲಿ ದೇಶದ ಜನತೆಗೆ ಎಚ್ಚರಿಕೆ ನೀಡಿದರು.