ನಿರುದ್ಯೋಗಿ ಪದವೀಧರರಿಂದ ಜನಗಣತಿ ಕಾರ್ಯ ಮಾಡಿಸಲು ಸಲಹೆ
ಬೆಂಗಳೂರು : ಜನಗಣತಿ ಹಾಗೂ ಚುನಾವಣೆ ಕಾರ್ಯಕ್ಕೆ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುವ ಸರಕಾರದ ಧೋರಣೆಗೆ ಭಾರತೀಯ ಜನತಾಪಕ್ಷದ ಶಾಸಕ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಲಕ್ಷಾಂತರ ನಿರುದ್ಯೋಗಿ ಪದವೀಧರರಿದ್ದು, ಅವರನ್ನು ಈ ಕಾರ್ಯಕ್ಕೆ ನಿಯೋಜಿಸ ಬೇಕೆಂದೂ ಅವರು ಸಲಹೆ ಮಾಡಿದ್ದಾರೆ.
ಈ ಸಂಬಂಧ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಅವರಿಗೆ ಪತ್ರವೊಂದನ್ನೂ ಬರೆದಿದ್ದಾರೆ. ನಿಮ್ಮ ಅವಧಿಯಲ್ಲಾದರೂ ಶಿಕ್ಷಣಕ್ಕೆ ಆದ್ಯತೆ - ಶಿಕ್ಷಕರಿಗೆ ಗೌರವ ದೊರಕುತ್ತದೆ ಎಂಬ ಭಾವನೆ ನನ್ನದಾಗಿತ್ತು. ಆದರೆ, ಫೆಬ್ರವರಿಯಲ್ಲಿ ನಡೆಯುವ ಜನಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವ ವಿಷಯ ತಿಳಿದು, ಮನಸ್ಸಿಗೆ ಬೇಸರವಾಯಿತು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಜನಗಣತಿ, ಚುನಾವಣೆ ಕೆಲಸವೇ ಮೊದಲಾದ ಸರಕಾರಿ ಕೆಲಸಗಳು ಮುಗಿದ ತರುವಾಯ ಸಮಯ ಉಳಿದರೆ ಶಿಕ್ಷಣ ನೀಡುವುದು ಶಿಕ್ಷಕರ ಕೆಲಸ ಎಂಬ ಸರ್ಕಾರದ ನಿಲುವು ಅರ್ಥಹೀನ ಎಂದು ಖಂಡಿಸಿರುವ ಅವರು, ಅಸಂಖ್ಯಾತ ನಿರುದ್ಯೋಗಿ ವಿದ್ಯಾವಂತ ಯುವಕ - ಯುವತಿಯರನ್ನು ಈ ಕಾರ್ಯಕ್ಕೆ ನಿಯೋಜಿಸುವುದು ಒಳಿತೆಂಬ ಸಲಹೆ ನೀಡಿದ್ದಾರೆ.
ಸರಕಾರ ಇಂತಹ ಕಾರ್ಯಗಳಿಗೆ ಸರ್ಕಾರದ ಇತರ ಇಲಾಖೆಗಳ ಸಿಬ್ಬಂದಿಯನ್ನೇಕೆ ತೊಡಗಿಸುವುದಿಲ್ಲ ಎಂದು ಪ್ರಶ್ನಿಸಿರುವ ಸುರೇಶ್ಕುಮಾರ್, ಶಿಕ್ಷಕರನ್ನು ಶಿಕ್ಷಣದ ವಿನಾ ಅನ್ಯ ಕಾರ್ಯಕ್ಕೆ ನಿಯೋಜಿಸುವುದಿಲ್ಲ ಎಂಬ ದೃಢ ನಿಲುವು ಪ್ರಕಟಿಸಬೇಕು ಎಂದೂ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.