ಬೆಂಗಳೂರಲ್ಲಿ ಬಾಲಕನ ಅಪಹರಣ : 20 ಲಕ್ಷ ರುಪಾಯಿಗೆ ಬ್ಲಾಕ್ಮೇಲ್
ಬೆಂಗಳೂರು : ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಮತ್ತೆ ಕಿಡ್ನ್ಯಾಪ್ - ಬ್ಲಾಕ್ಮೇಲ್ ಪ್ರಕರಣಗಳು ಹೆಚ್ಚುತ್ತಿವೆಯೇ? ಇತ್ತೀಚಿನ ಬೆಳವಣಿಗೆ ನೋಡಿದರೆ ಹಾಗೆನಿಸುತ್ತದೆ.
ಮೊನ್ನೆ ಭಾನುವಾರ ಬೆಂಗಳೂರು ನಗರದ ಹೈಸ್ಕೂಲ್ ವಿದ್ಯಾರ್ಥಿಯಾಬ್ಬನ ಅಪಹರಣವಾಗಿದೆ. ರಾಮಮೂರ್ತಿ ನಗರ ಲವರೀಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಪ್ರೇಮ್ ಕುಮಾರ್ನನ್ನು ಅಪಹರಿಸಿರುವ ದುಷ್ಕರ್ಮಿಗಳು ಬಾಲಕನ ಪಾಲಕರಿಂದ 20 ಲಕ್ಷ ರುಪಾಯಿ ಹಣ ಕೇಳಿದ್ದಾರೆ.
ಬಾಲಕ ಪ್ರೇಮ್ಕುಮಾರ್ ತಂದೆ ಗೋವಿಂದ್ ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿದ್ದಾರೆ. ಪ್ರೇಮ್ ಭಾನುವಾರ ಬೆಳಗ್ಗೆ ಸೈಕಲ್ ಏರಿ ಮನೆಯಿಂದ ಹೊರಟವನು ಮತ್ತೆ ಹಿಂತಿರುಗಲಿಲ್ಲ. ಮಧ್ಯಾಹ್ನ ಫೋನ್ ಮಾಡಿದ ವ್ಯಕ್ತಿಯಾಬ್ಬ, ತಾನು ಮಗುವನ್ನು ಅಪಹರಿಸಿರುವುದಾಗಿ ತಿಳಿಸಿ, ಮಗುವನ್ನು ಬಿಡಲು 20 ಲಕ್ಷ ರುಪಾಯಿ ಬೇಡಿಕೆ ಹಣ ಕೇಳಿದ, ಹಣ ಕೊಡಲು ನಿರಾಕರಿಸಿದರೆ, ಮಗುವನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ.
ದುಷ್ಕರ್ಮಿಗಳಿಗಾಗಿ ಹಾಗೂ ಬಾಲಕನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಬಾಲಕನ ಅಪಹರಣವಾಗಿ 2 ದಿನಗಳೇ ಕಳೆದಿದ್ದರೂ ಯಾವುದೇ ಸುಳಿವು ದೊರಕಿಲ್ಲ. ಈ ಹಿಂದೆ ಕಳೆದ ವರ್ಷ ಜನವರಿ 24ರಂದು ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿ, ಜನವರಿ 29ರಂದು ಮಗುವನ್ನು ಬಿಡಲು 3 ಲಕ್ಷ ರುಪಾಯಿಗಳ ಬೇಡಿಕೆ ಇಟ್ಟಿದ್ದ ಪ್ರಹ್ಲಾದ್ ಎಂಬ ಆರೋಪಿಯನ್ನು ಚೆಂಬಲ್ ಕಣಿವೆಯಲ್ಲಿ ಕಳೆದ ಆಗಸ್ಟ್ನಲ್ಲಿ ಬಂಧಿಸಲಾಗಿತ್ತು.
ಶ್ರೀರಾಮಪುರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ನಾಲ್ಕು ಮಕ್ಕಳ ಅಪಹರಣವೂ ಅಕ್ಟೋಬರ್ ತಿಂಗಳಿನಲ್ಲಿ ನಡೆದಿತ್ತು. ಮಗುವನ್ನು ಅಪಹರಿಸಿ ಭಾರಿ ಮೊತ್ತ ಕೇಳಿದ ಎಂಜಿನಿಯರ್ ದಂಪತಿಗಳನ್ನು ರಾಜರಾಜೇಶ್ವರಿ ನಗರದಲ್ಲಿ ಪೊಲೀಸರು ಬಂಧಿಸಿದ್ದರು. ಆನಂತರ ನಮಸ್ತೆ ಗಾರ್ಮೆಂಟ್ಸ್ನ ನಾರಾಯಣ ಭಟ್ ಅಪಹರಣ ಆಗಿತ್ತು. ಒಂದು ಕೋಟಿ ರುಪಾಯಿಗೆ ಬೇಡಿಕೆ ಸಲ್ಲಿಸಲಾಗಿತ್ತು.
ಹೊಟೆಲ್ ಉದ್ಯಮಿ ವೆಂಕಟೇಶ್ ಎಂಬುವವರ ಅಪಹರಣ ಕೂಡ ನಡೆದಿತ್ತು. ಖ್ಯಾತ ಉದ್ಯಮಿ ವಚಾನಿ ಅವರ ಪುತ್ರನ ಅಪಹರಣ ಪಾಲಕರನ್ನು ತಲ್ಲಣಗೊಳಿಸಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...