ಏಪ್ರಿಲ್ 3 ರಂದು ಗಂಗೂಲಿ ದಂಡು ಷಾರ್ಜಾದಲ್ಲೋ, ಪುಣೆಯಲ್ಲೋ ?
ಅಶೋಕ್ ಟುಟೇಜಾ
ದುಬೈ :ಏಪ್ರಿಲ್ 3 ರಂದು ಭಾರತ ಕ್ರಿಕೆಟ್ ತಂಡ ಷಾರ್ಜಾಕ್ಕೆ ಹೋಗುವುದೋ ಅಥವಾ ಕಾಂಗರೂಗಳ ವಿರುದ್ಧ ಸೆಣಸುವುದೋ ಅನ್ನುವ ಪ್ರಶ್ನೆ ಗೆ ಉತ್ತರ ಸುಲಭಕ್ಕೆ ಸಿಗುವಂತೆ ಕಾಣುತ್ತಿಲ್ಲ .
ಏ.3 ರಂದು ಪುಣೆಯಲ್ಲಿ ಹಾಗೂ 6 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ದಿನದ ಪಂದ್ಯಗಳನ್ನು ಪ್ರಸಕ್ತ ವೇಳಾಪಟ್ಟಿಯ ಪ್ರಕಾರ ಭಾರತ ಕ್ರಿಕೆಟ್ ತಂಡ ಆಡಲಿದೆ. ಆದರೆ, ಈಗಾಗಲೇ ನಿರ್ಧರಿಸಿರುವಂತೆ ಷಾರ್ಜಾ ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಏಪ್ರಿಲ್ 3 ರಂದೇ ಭಾರತ ಕ್ರಿಕೆಟ್ ತಂಡ ಷಾರ್ಜಾಕ್ಕೆ ಬಂದಿಳಿಯಲಿದೆ. ಈ ಏಪ್ರಿಲ್ 3ರ ಗೊಂದಲದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿರುವ ಜಯವಂತ ಲೆಲೆ, ವಿವಾದಾಸ್ಪದ ವಿಷಯದ ಬಗ್ಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದಿದ್ದಾರೆ.
ಷಾರ್ಜಾ ಟೂರ್ನಿಗೆ ಸರ್ಕಾರದಿಂದ ಹಸಿರು ನಿಶಾನೆ ವಿಶ್ವಾಸದಲ್ಲಿ ಬಿಸಿಸಿಐ
ಏಪ್ರಿಲ್ನಲ್ಲಿ 4 ರಿಂದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳೊಂದಿಗೆ ಷಾರ್ಜಾದಲ್ಲಿ ನಡೆಯುವ ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಭಾರತ ಕ್ರಿಕೆಟ್ ತಂಡಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವ ಕುರಿತು ಬಿಸಿಸಿಐ ಅಧಿಕಾರಿಗಳು ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.
ಈ ಮೊದಲು ಪಾಕಿಸ್ತಾನದಲ್ಲಿ ಸರಣಿ ಆಡಲು ತಂಡಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದರೂ, ಷಾರ್ಜಾ ಟೂರ್ನಿಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಗಲ್ಫ್ ನ್ಯೂಸ್ಗೆ ತಿಳಿಸಿದ್ದಾರೆ.
ಕ್ರಿಕೆಟಿಗರ ಬೆನಿಫಿಟ್ ಫಂಡ್ ಸರಣಿ (ಸಿಬಿಎಫ್ಎ) ಯಲ್ಲಿ ಮೂರು ವರ್ಷಗಳ ಕಾಲ ಆಡುವ ಒಪ್ಪಂದವನ್ನು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ಷಾರ್ಜಾ ಕ್ರಿಕೆಟ್ ಆಯೋಜಕರೊಂದಿಗೆ ಮಾಡಿಕೊಂಡಿವೆ. ಈ ಒಪ್ಪಂದ ಏಪ್ರಿಲ್ ಸರಣಿಯ ನಂತರ ಅನೂರ್ಜಿತಗೊಳ್ಳಲಿದೆ. ಆನಂತರ ಒಪ್ಪಂದವನ್ನು ಮುಂದುವರಿಸುವ ಕುರಿತು ಬಿಸಿಸಿಐ ನಿರ್ಣಯ ಕೈಗೊಳ್ಳುವುದು. ಈ ಹಿನ್ನೆಲೆಯಲ್ಲಿ ತಟಸ್ಥ ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಸರ್ಕಾರದಿಂದ ಒಪ್ಪಿಗೆ ಸಿಗುವ ಸಂಭವ ಇದೆ ಎಂದು ಬಿಸಿಸಿಐ ನಿರೀಕ್ಷಿಸಿದೆ.
ಈ ನಡುವೆ ಮಲೇಷಿಯಾ, ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವೆ ಮಲೇಷಿಯಾದಲ್ಲಿ ನಡೆಯಬೇಕಿದ್ದ ತ್ರಿಕೋನ ಸರಣಿ ರದ್ದಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಪಾಕ್ ವಿರುದ್ಧ ಆಡಲು ಭಾರತ ಕಾಲ್ತೆಗೆದಿರುವುದೇ ಸರಣಿ ರದ್ದಾಗಲು ಕಾರಣ ಎಂದು ಅವರು ಹೇಳಿದ್ದಾರೆ.
(ಯುಎನ್ಐ)