ಕೊಬ್ಬರಿ- ಬೆಲ್ಲ ಒಣಗಿಸಲು ಬಿಡದ ಮೋಡ
ಬೆಂಗಳೂರು : ಸಂಕ್ರಾತಿ ಹಬ್ಬಕ್ಕೆ ಕೊಬ್ಬರಿ, ಬೆಲ್ಲ ಹೆಚ್ಚಿ ಮಾಳಿಗೆಯಲ್ಲಿ ಒಣಗಿಸಲು ತವಕಿಸುತ್ತಿರುವ ಮಾನಿನಿಯರಿಗೆ ಕವಿದಿರುವ ಮೋಡ ಬೇಸರ ತಂದಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮೋಡ ಮುಸುಕಿದೆ. ಒಂದೆರಡು ಬಾರಿ ಕೆಲವು ಬಡಾವಣೆಗಳಲ್ಲಿ ತುಂತುರು ಮಳೆಯೂ ಬಿದ್ದಿದೆ.
ರಾಜ್ಯದ ಕೆಲವು ಕಡೆ ಮಳೆಯಾದ ಬಗ್ಗೆ ವರದಿಗಳಿವೆ. ಕನಕಪುರ ಹಾಗೂ ಕೆ.ಜಿ.ಎಫ್ನಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಬಿದ್ದಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಅನೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಮುಖ ಕಂಡು ಬಂದಿದೆ. ಉಳಿದಂತೆ ತಾಪಮಾನ ಸಾಮಾನ್ಯವಾಗಿತ್ತು.
ರಾಜ್ಯದ ಅತಿ ಕಡಿಮೆ ತಾಪಮಾನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದ್ದು. ಅಲ್ಲಿ ಕನಿಷ್ಠ ತಾಪಮಾನ 12.2ಡಿಗ್ರಿ ಸೆಲ್ಸಿಯಸ್ ಇತ್ತು. ಮುನ್ಸೂಚನೆಯಂತೆ ರಾಜ್ಯದ ಕೆಲವೆಡೆಗಳಲ್ಲಿ ಮಳೆ ಆಗುವ ಸೂಚನೆಗಳಿದ್ದು, ಹೆಚ್ಚಿನ ವಿಶೇಷ ಸೂಚನೆಗಳು ಏನೂ ಇಲ್ಲ. ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಒಂದೆರಡು ವರಸೆ ಮಳೆ ಬೀಳುವ ಸೂಚನೆ ಇದೆ. ಕನಿಷ್ಠ ಉಷ್ಣಾಂಶ 19 ಡಿಗ್ರಿಯ ಆಸುಪಾಸಿನಲ್ಲಿರುತ್ತದೆ ಎಂದಿದೆ ಹವಾಮಾನ ವೀಕ್ಷಣಾಲಯದ ವರದಿ.