ಕಾರಿಗನೂರಿನಲ್ಲಿ ಜ.4ರಂದು ಸರ್ವಧರ್ಮ ಸಮ್ಮೇಳನ
ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ ತವರೂರಾದ ಚೆನ್ನಗಿರಿ ತಾಲೂಕಿನ ಕಾರಿಗನೂರಿನಲ್ಲಿ ಗುರುವಾರ (ಜ.4) ಪಟೇಲರ ಸಂಸ್ಮರಣೆ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಈ ಸರ್ವಧರ್ಮ ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.
ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಮೂರು ಸಾವಿರ ಮಠದ ಇರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು, ಕೋಡಿಹಳ್ಳಿಯ ರುದ್ರಾಕ್ಷಿ ಮುನಿ ದೇಶಿಕೇಂದ್ರ ಸ್ವಾಮಿಗಳು, ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಚನ್ನ ಗಿರಿಯ ಸೇಂಟ್ ಫ್ರಾನ್ಸಿಸ್ ಜೇವಿಯರ್ ಚರ್ಚ್ನ ರೆವರೆಂಡ್ ಫಾದರ್ ವಿಲಿಯಂ ವಿನ್ನಿ ಫ್ರೆಡ್, ದುರ್ಗದ ಮಸೀದಿಯ ಡಾ. ಹಫೀಜ್ ಮಹಮ್ಮದ್ ಮುಜಾಫಿರ್ ಹುಸೇನ್ ಶಕೀಲ್, ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳೇ ಮೊದಲಾದವರು ಈ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.