ಭಾರತದೊಂದಿಗೆ ಐಟಿ ಸೌಹಾರ್ದಕ್ಕೆ ಮಂಗೋಲಿಯಾ ಒತ್ತು
ಬೆಂಗಳೂರು : ಭಾರತ- ಮಂಗೋಲಿಯಾ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ನಮ್ಮ ಒತ್ತು ಎಂದು ಮಂಗೋಲಿಯಾ ಅಧ್ಯಕ್ಷ ನಾಸ್ಟಾಲ್ಜಿನ್ ಬಾಗಬಂದಿ ಮಂಗಳವಾರ ಸಾರಿ ಹೇಳಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮಾರುಕಟ್ಟೆ, ಇಂಟರ್ನೆಟ್ ಸೌಕರ್ಯಗಳ ವೃದ್ಧಿ ಹಾಗೂ ಹಳ್ಳಿ ಹಳ್ಳಿಗೂ ಮಾಹಿತಿ ಕೊಂಡೊಯ್ಯುವ ಸ್ಪರ್ಧಾತ್ಮಕ ವಿಷಯಗಳಲ್ಲಿ ಭಾರತ- ಮಂಗೋಲಿಯಾ ದ್ವಿಪಕ್ಷೀಯ ಸಹಕಾರ ಬಹು ಮುಖ್ಯ ಎಂದರು.
ತಮ್ಮ ದೆಹಲಿ ಭೇಟಿಯಲ್ಲಿ ಮಂಗೋಲಿಯ- ಭಾರತ ಜಂಟಿ ತಾಂತ್ರಿಕ ಕಾರ್ಯ ಸಮೂಹದ ಸ್ಥಾಪನೆಯ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿದ್ದು, ಅಂದಿನಿಂದ ಉಭಯ ದೇಶಗಳೊಡನೆ ಸಹಕಾರ ಪ್ರಾರಂಭವಾಗಲಿದೆ. ಭಾರತದ ಮೂಲಭೂತ ಸೌಕರ್ಯಗಳ ಸಚಿವಾಲಯ ಹಾಗೂ ಮಂಗೋಲಿಯಾ ಮೂಲಭೂತ ಸೌಕರ್ಯಗಳ ಸಚಿವಾಲಯದ ನಡುವೆ ಈ ಒಡಂಬಡಿಕೆ ನಡೆಯಲಿದೆ ಎಂದು ಬಾಗಬಂದಿ ತಿಳಿಸಿದರು. ವಿಜ್ಞಾನ ಮನುಷ್ಯನ ಕೆಲಸದ ಹೊರೆ ಇಳಿಸುವುದಷ್ಟೇ ಅಲ್ಲ , ದೇಶದ ಸರ್ವತೋಮುಖ ಪ್ರಗತಿಗೆ ಕಾರಣವಾಗಬಲ್ಲ ಬಲ ವರ್ಧಿಸುತ್ತದೆ ಎಂಬ ಚಾಚಾ ನೆಹರೂ ಮಾತನ್ನು ಬಾಗಬಂದಿ ನೆನಪಿಸಿದರು.
ಮಂಗೋಲಿಯಾ- ಭಾರತ ನಡುವೆ ವಿಮಾನ ಹಾರಿಸುವ ಒಪ್ಪಂದಕ್ಕೆ ಚಾಲನೆ
ನಾಗರಿಕ ವಿಮಾನ ಯಾನ ಕುರಿತಂತೆ 1998ರಲ್ಲೇ ಉಭಯ ರಾಷ್ಟ್ರಗಳೊಡನೆ ಆಗಿರುವ ಒಪ್ಪಂದಕ್ಕೆ ಚಾಲನೆ ದೊರಕಿಸುವ ಯತ್ನ ನಡೆಯುತ್ತಿದೆ. ಮಂಗೋಲಿಯಾ- ಭಾರತ ನಡುವೆ ನೇರ ವಿಮಾನ ಯಾನ ಕಷ್ಟ ಸಾಧ್ಯವಾದರೆ, ಎರಡೂ ದೇಶಗಳೊಡನೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ವಿಮಾನಗಳನ್ನು ಹಾರಿಸುವ ವ್ಯವಸ್ಥೆ ಮಾಡಲಾಗುವುದು. ರಷ್ಯಾ- ಚೀನಾಗಳೊಂದಿಗೆ ಭಾರತವನ್ನು ಸಂಪರ್ಕಿಸುವ ಕಿಂಡಿಯಾಗಿ ಮಂಗೋಲಿಯಾ ರೂಪುಗೊಳ್ಳಲಿ ಎಂಬುದೇ ನಮ್ಮ ಅಭಿಲಾಷೆ ಎಂದು ಬಾಗಬಂದಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಸಹ ಹಾಜರಿದ್ದರು.
ಬೆಂಗಳೂರಿಂದ ದೆಹಲಿಗೆ : ಎರಡು ದಿನಗಳ ತಮ್ಮ ಬೆಂಗಳೂರು ಭೇಟಿಯಲ್ಲಿ ಇಸ್ರೋ ಮತ್ತು ಭಾರತೀಯ ಟೆಕ್ ಪಾರ್ಕನ್ನು ವೀಕ್ಷಿಸಿದ ಬಾಗಬಂದಿ, ನಂತರ ದೆಹಲಿಗೆ ತೆರಳಿದರು. ರಾಜ್ಯಪಾಲರಾದ ವಿ.ಎಸ್.ರಮಾದೇವಿ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ನಗರದ ಮೇಯರ್ ಪ್ರೇಮಾ ಕಾರ್ಯಪ್ಪ , ರಾಜ್ಯ ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ ಹಾಗೂ ಮತ್ತಿತರ ಉನ್ನತ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಟ್ಟರು.
(ಯುಎನ್ಐ)