ಹದನೂರಿನ ಗ್ರಾಮಸ್ಥರು ವಿದ್ಯುತ್ ಬೆಳಕಿನಲ್ಲಿ ಉಂಡು 25 ದಿನಗಳಾದವು
ಹದನೂರು : ಹೊಸ ವರ್ಷ ಬೆಳಕನ್ನು ಹೊತ್ತು ತರಬಹುದೆನ್ನುವ ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ಹದನೂರು ಗ್ರಾಮಸ್ಥರ ನಿರೀಕ್ಷೆ ನಿಜವಾಗಲಿಲ್ಲ . ನೆರೆಯ ಗ್ರಾಮಸ್ಥರು ದೀಪಾಲಂಕಾರದ ಬೆಳಕಿನಲ್ಲಿ ಸಂತೋಷ ಹಂಚಿಕೊಳ್ಳುತ್ತಿದ್ದರೆ, ಹದನೂರಿನವರು ಕಂಬಳಿ ಹೊದ್ದು ಮಲಗಿದ್ದರು. ಅಂದಹಾಗೆ ಗ್ರಾಮಸ್ಥರು ವಿದ್ಯುತ್ ಬೆಳಕಿನಲ್ಲಿ ಉಂಡು 25 ದಿನಗಳಾದವು.
ಹದನೂರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು ಮೊನ್ನಿನ ಡಿಸೆಂಬರ್ 7ರಂದು . ಅಂದಿನಿಂದ ದೂರುಗಳನ್ನು ಹೊತ್ತೊಯ್ದು ಗ್ರಾಮಸ್ಥರು ಬಸವಳಿದಿದ್ದಾರೆ. ಈ ನಡುವೆ ಇಲಾಖೆಯ ಲೈನ್ಮನ್ಗಳು ಬಂದು ರಿಪೇರಿ ಶಾಸ್ತ್ರ ಮುಗಿಸಿ ಹೋದದ್ದೂ ಆಯಿತು. ಆದರೆ, ದೀಪ ಮಾತ್ರ ಹತ್ತಲಿಲ್ಲ . ಬದಲಿಗೆ ಸಿಡಿದವು. ಕಾರಣ ಹೈ ವೋಲ್ಟೆಜ್ ಸಮಸ್ಯೆ ಎನ್ನುತ್ತಾರೆ ಗ್ರಾಮಸ್ಥರು.
ಬಾವಿಯಲ್ಲಿ ನೀರಿದ್ದೂ ಬೆಳೆಗಳು ಒಣಗುತ್ತಿರುವುದನ್ನು ಗ್ರಾಮದ ರೈತ ಅಸಹಾಯಕತೆಯಿಂದ ನೋಡುತ್ತಿದ್ದಾನೆ. ಗಂಜಿ ಬೇಯಿಸಲು ಬೇಕಾದ ಹಿಟ್ಟಿಗಾಗಿ ಗಿರಣಿ ಹುಡುಕಿಕೊಂಡು ಐದಾರು ಮೈಲಿ ನಡೆಯುತ್ತಿದ್ದಾಳೆ ಗ್ರಾಮದ ಗರತಿ. ಇದಾವುದರ ಪರಿವೆಯೂ ಇಲ್ಲದೆ ಶಹಾಪುರ ಕ್ಷೇತ್ರದ ಶಾಸಕರು ನಿರುಮ್ಮಳವಾಗಿದ್ದಾರೆ.
(ಇನ್ಫೋ ವಾರ್ತೆ)