ಮಾಂಜ್ರಾ ನದಿಯಲ್ಲಿ ದೋಣಿ ಮುಳುಗಿ 7 ಸಾವು
ಬೀದರ್ : ಇಲ್ಲಿಗೆ 15 ಕಿ.ಮೀಟರ್ ದೂರದ ಕರ್ನಾಟಕ -ಆಂಧ್ರಪ್ರದೇಶ ಗಡಿ ಗ್ರಾಮವಾದ ಕಾರಾಮಂಗಿಯ ಬಳಿ ಮಾಂಜ್ರಾ ನದಿಯಲ್ಲಿ ನಾಡ ದೋಣಿ ಮುಳುಗಿದ ಪರಿಣಾಮವಾಗಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಮಾಂಜ್ರಾ ನದಿ ಪಾಲಾದವರನ್ನು ಕೃಷ್ಣಮ್ಮ (40), ಶ್ರೀಕಾಂತ (20), ಮಾಣಿಕ ರಾವ್ (35), ಕಿಶೋರ್ (11), ಜಗದೇವಿ (18) ಹಾಗೂ ಕಲ್ಪನಾ ಮತ್ತು ಕಲ್ಲಪ್ಪ ಎಂದು ಗುರುತಿಸಲಾಗಿದೆ. ಗೋವಿಂದ್ ಹಾಗೂ ನರಸಿಂಗ್ ಎಂಬಿಬ್ಬರು ಮಾತ್ರ ಈಜಿ ದಡ ಸೇರಿದ್ದಾರೆ.
ಭಾನುವಾರ ಮಧ್ಯಾಹ್ನ ಒಂದೇ ಕುಟುಂಬಕ್ಕೆ ಸೇರಿದ 9 ಮಂದಿ ಕಾರಾಮಂಗಿಯಿಂದ ಚಿಮಕೋಡ್ ಗ್ರಾಮಕ್ಕೆ ಹೋಗಲು ದೋಣಿ ಏರಿದ್ದರು. ಆರು ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದ ನಾಡದೋಣಿ (ತೆಪ್ಪ) 9 ಜನರ ಭಾರವನ್ನು ತಾಳಲಾರದೆ ನದಿಯಲ್ಲಿ ಮುಳುಗಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ದುರಂತದಲ್ಲಿ ಸಾವನ್ನಪ್ಪಿದ ಮಾಣಿಕ ರಾವ್ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಲಿ 5 ಶವಗಳು ಪತ್ತೆಯಾಗಿದ್ದು, ಉಳಿದೆರಡು ಶವಗಳಿಗಾಗಿ ಶೋಧ ಮುಂದುವರಿದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದರು.