ಭಾರಿ ಜನಪ್ರಿಯವಾಗುತ್ತಿರುವ ಬೊಂಡ (ಎಳನೀರು) ಮೇಳ
ಉಪ್ಪಿನಂಗಡಿ : ಪೆಪ್ಸಿ ಹಾಗೂ ಕೋಕಾಕೋಲಾಗಳಿಗೆ ಸವಾಲಾಗಿ ಕಲ್ಲಡ್ಕದಲ್ಲಿ ಡಿಸೆಂಬರ್ ಎರಡನೇ ವಾರ ನಡೆದ ಬೊಂಡ ಮೇಳದ ಯಶಸ್ಸು ಹೊಸವರ್ಷದ ಪ್ರಥಮ ದಿನವೂ ಮುಂದುವರಿಯಿತು. ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದ ಬೊಂಡ ಮೇಳಕ್ಕೆ ಅಭೂತಪೂರ್ವ ಯಶಸ್ಸು ದೊರಕಿತು.
ಕಲ್ಲಡ್ಕದ ಮೇಳದಲ್ಲಿ 10 ಸಾವಿರ ಬೊಂಡಾಗಳು ಮಾರಾಟವಾಗಿದ್ದರೆ, ಉಪ್ಪಿನಂಗಡಿಯಲ್ಲಿ ಒಂದೇ ದಿನ 12 ಸಾವಿರಕ್ಕೂ ಹೆಚ್ಚು ಎಳನೀರುಗಳ ಮಾರಾಟ ನಡೆಯಿತು. ಸುಮಾರು 40 ಗ್ರಾಮಗಳ ರೈತರು ರಾಷ್ಟ್ರೀಯ ಹೆದ್ದಾರಿಯ ಗಾಂಧೀ ಪಾರ್ಕ್ ಬಳಿ ಹಾಗೂ ಬಸ್ ನಿಲ್ದಾಣದಲ್ಲಿ ರಾಶಿ ರಾಶಿ ಹಾಕಲಾಗಿದ್ದ ಬೊಂಡಗಳ ಕೆಲವೇ ಗಂಟೆಗಳಲ್ಲಿ ಕರಗಿ ಹೋದವು.
ಕೇವಲ ಐದೇ ರುಪಾಯಿ : ಎಳನೀರೊಂದಕ್ಕೆ ಕೇವಲ ಐದೇ ರುಪಾಯಿ, ಬೊಂಡಾ ಕುಡಿಯಿರಿ ಎಂಬ ಘೋಷಣೆಗಳು ಮೈಕ್ಗಳ ಮೂಲಕ ಮೊಳಗುತ್ತಿದ್ದವು. ಕರಪತ್ರಗಳನ್ನೂ ಹಂಚಲಾಯಿತು. ಕೋಲಾ, ಪೆಪ್ಸಿಗಳಿಗೆ ಸವಾಲಾಗಿ ನಿಂತಿರುವ ರೈತರ ಬೊಂಡ ಮೇಳಕ್ಕೆ ಸುಡುತ್ತಿದ್ದ ಸೂರ್ಯನೂ ನೆರವಿಗೆ ನಿಂತ.
ತಾಳೆ ಬೊಂಡ : ಸಾಮಾನ್ಯವಾಗಿ ಚಳಿ ಹಾಗೂ ಬೇಸಿಗೆ ಕಾಲದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಗಳಲ್ಲಿ ಮಾತ್ರ ಕಾಣಸಿಗುವ ತಾಳೆ ಬೊಂಡ (ಇರೋಳ್) ಈ ಬೊಂಡ ಮೇಳದ ಪ್ರಮುಖ ಆಕರ್ಷಣೆ ಆಗಿತ್ತು. ಬೆಳಗ್ಗೆ ಮೂರನೇ ಬೃಹತ್ ಬೊಂಡ ಮೇಳವನ್ನು ಹಿರಿಯ ಸಹಕಾರಿ ಪೆರಾಜೆ ಶ್ರೀನಿವಾಸ ರಾವ್ ಉದ್ಘಾಟಿಸಿದರು. ಜಿಲ್ಲಾ ಹಾಲು ಒಕ್ಕೂಟದ ಸವಣೂರು ಸೀತಾರಾಮ ರೈ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಮೊದಲಾದವರು ಮೇಳದಲ್ಲಿ ಭಾಗವಹಿಸಿ ರೈತರಿಗೆ ಶುಭಕೋರಿದರು.