ಮಂಗಳೂರಲ್ಲಿಯೇ ಅಬ್ಬಕ್ಕ ಪ್ರತಿಮೆ ಸ್ಥಾಪನೆಗೆ ರಾಣಿ ಸತೀಶ್ ಒಲವು
ಮಂಗಳೂರು : ಹತ್ತೂವರೆ ಲಕ್ಷ ರುಪಾಯಿ ಮೊತ್ತದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಪ್ರತಿಮೆಯನ್ನು ಶಿಲ್ಪ ಕಲಾ ಅಕಾಡೆಮಿ ನಿರ್ಮಿಸಿದ್ದು , ಅದನ್ನು ಮಂಗಳೂರಿನಲ್ಲಿಯೇ ಸ್ಥಾಪಿಸುವಂತೆ ಅಬ್ಬಕ್ಕ ಸಮಿತಿ ಪ್ರಯತ್ನ ನಡೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಸಲಹೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಅಬ್ಬಕ್ಕ ಪ್ರತಿಮೆಯನ್ನು ಬೆಂಗಳೂರಿನ ಆನಂದರಾವ್ ಸರ್ಕಲ್ಲಿನಲ್ಲಿ ಸ್ಥಾಪಿಸಲು ಈ ಮೊದಲು ತೀರ್ಮಾನಿಸಲಾಗಿತ್ತು . ಆದರೆ, ಇಲಾಖಾ ಸಮೀಕ್ಷೆ ಪ್ರತಿಮೆ ಸ್ಥಾಪನೆಗೆ ಸ್ಥಳ ಸೂಕ್ತವಲ್ಲ ಎಂದು ತಿಳಿಸಿರುವುದರಿಂದ ಪ್ರತಿಮೆಯನ್ನು ಮಂಗಳೂರಿನಲ್ಲಿಯೇ ಸ್ಥಾಪಿಸುವುದು ಒಳಿತು ಎಂದು ಸಚಿವೆ ಹೇಳಿದರು.
ಮಂಗಳೂರಿನಿಂದ ದೆಹಲಿಗೆ ತೆರಳುವ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಅಬ್ಬಕ್ಕ ಎಕ್ಸ್ಪ್ರೆಸ್ ಎಂಬ ಹೆಸರಿಡಬೇಕೆಂಬ ಸಮಿತಿಯ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ಆಶ್ವಾಸನೆ ನೀಡಿದರು. ಕರಾವಳಿ ಹಾಗೂ ಅಬ್ಬಕ್ಕ ಉತ್ಸವ ಎರಡಕ್ಕೂ ಅನುದಾನ ನೀಡುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ಎರಡೂ ಉತ್ಸವಗಳನ್ನು ಏಕ ಕಾಲದಲ್ಲಿ ಆಚರಿಸುವುದು ಉತ್ತಮ ಎಂದರು.
ಇದೇ ಸಂದರ್ಭದಲ್ಲಿ ಜಾನಪದ ಪಾಡ್ದನದ ಕವಯತ್ರಿ ಗಿಡಿಕೆರೆ ರಾಮಕ್ಕ ಮುಗೇರ್ತಿ ಹಾಗೂ ನಾಟಿವೈದ್ಯೆ ಪೊಡಿಮ್ಮ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ರಾಣಿ ಸತೀಶ್ ವಿತರಿಸಿದರು. ದಿನಕರ್ ಉಳ್ಳಾಲ್, ಶಾಸಕ ಫರೀದ್ ಹಾಗೂ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಮಂಗಳೂರು ಪ್ರತಿನಿಧಿಯಿಂದ)