ಕವಿಶೈಲದ ಸ್ಮಾರಕ, ಕುವೆಂಪು ಅವರ ಮನೆ ಫೆ.2ರಂದು ನಾಡಿಗರ್ಪಣೆ
ಶಿವಮೊಗ್ಗ: ಕೇವಲ ಕಲಿತದ್ದನ್ನೇ ಹಾಡುವ ಬದಲು ನಾಡಿನ ಸಂಗೀತಗಾರರು ಹೊಸತನ್ನು ಶೋಧಿಸಲು ಪ್ರಯತ್ನಿಸಿದರೆ, ಸಂಗೀತ ಕ್ಷೇತ್ರ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವೀ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರಾದ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಜನ್ಮದಿನ ಅಂಗವಾಗಿ ಏರ್ಪಡಿಸಲಾಗಿದ್ದ ಭಾವಗೀತೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಸಂಗೀತಗಾರರು ಹೊಸ ಆಯಾಮದತ್ತ ಗಮನ ಹರಿಸಬೇಕು. ಭಾವಗೀತೆಯಲ್ಲಿ ಒಂದು ವಿರಾಮ ಕೂಡ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕು ಎಂದರು.
ಕವಿಶೈಲ ಸ್ಮಾರಕ : ಜೀರ್ಣೋದ್ಧಾರಗೊಂಡಿರುವ ಕುವೆಂಪು ಅವರ ಮನೆಯನ್ನು ಫೆ.2ರಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನಾಡಿಗೆ ಅರ್ಪಿಸಲಿದ್ದಾರೆ. ಕವಿಶೈಲದಲ್ಲಿರುವ ಸ್ಮಾರಕವನ್ನು ಕವಿ ಜಿ.ಎಸ್. ಶಿವರುದ್ರಪ್ಪ ಅವರು ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ ಎಂದು ನಿವೃತ್ತ ನ್ಯಾಯಾಧೀಶ ಎನ್.ಡಿ. ವೆಂಕಟೇಶ್ ಅವರು ತಿಳಿಸಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಕವಿಶೈಲದ ಕಾಮಗಾರಿ ಸ್ವಲ್ಪ ಬಾಕಿ ಉಳಿದಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
(ಇನ್ಫೋ ವಾರ್ತೆ)