Get Updates
Get notified of breaking news, exclusive insights, and must-see stories!

ಹೈಜಾಕ್‌ ದುಃಸ್ವಪ್ನಕ್ಕೆ ಒಂದು ವರ್ಷ

ಹೈದರಾಬಾದ್‌: ಡಿಸೆಂಬರ್‌ 23ಕ್ಕೆ ಕಂದಹಾರ್‌ ವಿಮಾನ ಅಪಹರಣಕ್ಕೆ ಒಂದು ವರ್ಷ ತುಂಬಿದೆ. ಜಾಗತಿಕ ಮಟ್ಟದಲ್ಲಿ ವಿಮಾನ ಪ್ರಯಾಣದ ಸುರಕ್ಷತೆ ಬಗ್ಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅಪಹರಣಗಳು ಮತ್ತು ಅಪಘಾತಗಳು ನಡೆಯುತ್ತಲೇ ಇವೆ. ಎಲ್ಲ ಅಪಹರಣಗಳಿಗೆ ಭದ್ರತೆಯಲ್ಲಿನ ದೋಷ ಕಾರಣವಾದರೆ, ಅನೇಕ ಅಪಘಾತಗಳಿಗೆ ತಾಂತ್ರಿಕ ದೋಷ ಮುಖ್ಯ ಕಾರಣವಾಗಿದೆ. ಮಂಗಳೂರಿನಲ್ಲಿ ವಿಮಾನ ಇಳಿಯುವ ಕಾಲಕ್ಕೆ ಚಕ್ರ ಸ್ಫೋಟಿಸಿ ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವುದು ವಿಮಾನಗಳ ಸುರಕ್ಷಿತವಲ್ಲದ ಪ್ರಯಾಣಕ್ಕೆ ಲೇಟೆಸ್ಟ್‌ ಉದಾಹರಣೆ.

ಅಪಹರಣ ವಿರೋಧಿ ಕಾರ್ಯಕ್ರಮ : ಕಠ್ಮಂಡುವಿನಿಂದ ಅಪಹರಣವಾದ ಇಂಡಿಯನ್‌ ಏರ್‌ಲೈನ್ಸ್‌ಗೆ ಸೇರಿದೆ ಕಠ್ಮಂಡು-ದೆಹಲಿ ನಡುವೆ ಸಂಚರಿಸುತ್ತಿದ್ದ ಐಸಿ- 814 ವಿಮಾನ ಅಪಹರಣವಾಗಿ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕೇಂದ್ರ ತರಬೇತಿ ಸಂಸ್ಥೆ , ಅಪಹರಣ ವಿರೋಧಿ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ಏರ್ಪಡಿಸಿದೆ. ಅಪಹೃತ ವಿಮಾನದಲ್ಲಿ ಸಹ ಚಾಲಕರಾಗಿ ಕೆಲಸ ಮಾಡಿದ್ದ ರಾಜೇಂದ್ರ ಕುಮಾರ್‌ ಗೌಡ್‌ ಅವರು ಅಪಹರಣ ಕಾಲದ ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು.

ಕಳೆದ ಡಿಸೆಂಬರ್‌ 23ರಂದು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ವಿಮಾನವನ್ನು ಕಠ್ಮಂಡುವಿನಿಂದ ಅಪಹರಿಸಿ ವಿವಿಧ ಕಡೆ ವಿಮಾನ ಇಳಿಸುವ ಯತ್ನ ವಿಫಲವಾದುದರಿಂದ ಅಪ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದ್ದರು. ಕಟ್ಟಾ ಉಗ್ರಗಾಮಿ ಮಸೂದ್‌ ಅಜರ್‌ ಸೇರಿದಂತೆ ಇತರ ಇಬ್ಬರು ಉಗ್ರಗಾಮಿಗಳನ್ನು ಬಿಡುಗಡೆ ಮಾಡಲು ಸರಕಾರ ಒಪ್ಪಿದ ನಂತರ ಅಪಹೃತ ವಿಮಾನವನ್ನು ಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂಬಂಧ ತಮ್ಮ ಅನುಭವಗಳನ್ನು ಯುಎನ್‌ಐನೊಂದಿಗೆ ಹಂಚಿಕೊಂಡಿರುವ ರಾಜೇಂದ್ರ ಕುಮಾರ್‌ ಅವರು ಅಪಹರಣ ಪ್ರಕರಣಗಳಿಗೆ ಅಂತ್ಯ ಕಾಣಿಸಲು ಇನ್ನಷ್ಟು ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಹೈಜಾಕ್‌ ಘಟನೆ ನಡೆದ ನಂತರ ಕಠ್ಮಂಡುವಿನಲ್ಲಿ ಮತ್ತು ಹೈದರಾಬಾದ್‌ನಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಆದರೆ ಉಳಿದ ಕಡೆ ಯಾವ ಕ್ರಮಗಳೂ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ವಿಮಾನದಲ್ಲಿದ್ದ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದ ಸತೀಶ್‌ ಅವರ ಪ್ರಕಾರ, ಅಪಹರಣ ಕಾಲದಲ್ಲಿ ತಾವು ಬದುಕಿ ವಾಪಸ್‌ ಬರುವ ಬಗ್ಗೆ ಯಾವುದೇ ಆಶಾಭಾವನೆ ಹೊಂದಿರಲಿಲ್ಲ. ಅದರಲ್ಲೂ ಡಿಸೆಂಬರ್‌ 30ರಂದು ಎಲ್ಲರೂ ತಮ್ಮ ಇಷ್ಟದೇವರುಗಳನ್ನು ಪ್ರಾರ್ಥಿಸಬೇಕೆಂದು ಉಗ್ರಗಾಮಿಗಳು ಆದೇಶ ನೀಡಿದಾಗ ಎಲ್ಲ ಆಶೆಗಳನ್ನೂ ತಾವು ಬಿಟ್ಟಿದ್ದಾಗಿ ಹೇಳಿದ್ದಾರೆ. ಪ್ರತಿ ಬಾರಿ ಮಾತುಕತೆ ವಿಫಲವಾದಾಗಲೂ ಉಗ್ರಗಾಮಿಗಳು ತೊಂದರೆ ಕೊಡುತ್ತಿದ್ದರು. 10 ಪ್ರಯಾಣಿಕರನ್ನು ಕೊಂದು ಹೊರಕ್ಕೆಸೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಅದೊಂದು ದುಸ್ವಪ್ನ, ಅಂತ ವೇಳೆಯಲ್ಲಿ ಒಬ್ಬ ಉಗ್ರಗಾಮಿ ತೆಗೆದುಕೊಳ್ಳುವ ಆತುರದ ನಿರ್ಧಾರ ಯಾರ ಜೀವಗಳನ್ನಾದರೂ ತೆಗೆಯಬಹುದಾದ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಸತೀಶ್‌ ಹೇಳಿದ್ದಾರೆ.

ಎರಡನೇ ಹುಟ್ಟು : ಘಟನೆಯಿಂದ ತಮ್ಮ ಮಾಮೂಲು ಕೆಲಸಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಘಟನೆ ನಡೆದ ಒಂದೇ ವಾರಕ್ಕೆ ಕೆಲಸಕ್ಕೆ ಹಾಜರಾದ ಎರಡನೇ ವ್ಯಕ್ತಿ ತಾವು ಎಂದು ಗೌಡ್‌ ತಿಳಿಸಿದ್ದಾರೆ. ಗಗನಸಖಿ ತಾಪಾ ದೇವ್‌ನಾಥ್‌ ಅವರದು ಇನ್ನೊಂದು ಅನುಭವ. ತಮ್ಮ ಒಂದೂವರೆ ವರ್ಷದ ಮಗುವನ್ನು ಜ್ಞಾಪಿಸಿಕೊಂಡಾಗ ತುಂಬಾ ಬೇಜಾರಾಗುತ್ತಿತ್ತು. ಬಿಡುಗಡೆಯಾದಾಗ ಇನ್ನೊಮ್ಮೆ ಹುಟ್ಟಿ ಬಂದ ಹಾಗಾಯಿತು ಎಂದಿದ್ದಾರೆ.

ಅಪಹರಣದಿಂದ ತಮ್ಮ ಮಗಳು ಮಾನಸಿಕವಾಗಿ ಗಟ್ಟಿಯಾದಳು. ಹಿರಿಯ ಗಗನಸಖಿಯಾಗಿ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಆಕೆ ಕಲಿತಳು ಎಂದು ಇನ್ನೊಬ್ಬ ಗಗನಸಖಿ ರಜನಿ ಶೇಖರ್‌ ಅವರ ತಂದೆ ಹೇಳಿದ್ದಾರೆ. 200ಕ್ಕೂ ಹೆಚ್ಚು ಇದ್ದ ಪ್ರಯಾಣಿಕರೂ ಸೇರಿದಂತೆ ಎಲ್ಲರ ಸುರಕ್ಷತೆ ಮುಖ್ಯವಾದ ಘಳಿಗೆಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಇಂಥ ಪರಿಸ್ಥಿಯಿಂದ ಸುರಕ್ಷಿತವಾಗಿ ನಿಭಾಯಿಸಿಕೊಂಡು ಬಂದ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಅವರು. ಈ ಘಟನೆಯಿಂದ ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು. ಹೇಗೆ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಲಿತೆ ಎನ್ನುತ್ತಾರೆ ಇನ್ನೊಬ್ಬ ಗಗನಸಖಿ ಸಬಿತಾ. ಅಪಹರಣಕ್ಕೊಳಗಾಗಿದ್ದ ವಿಮಾನದಲ್ಲಿದ್ದ ಸಿಬ್ಬಂದಿಗಳೊಂದಿಗೆ ಈ ಬಾರಿಯ ಹೊಸ ವರ್ಷಾಚರಣೆ ಮಾಡುವ ಕನಸು ಸಬಿತಾ ಅವರದು. ಅಪಹೃತ ವಿಮಾನದಲ್ಲಿದ್ದ ಸಿಬ್ಬಂದಿಗಳಲ್ಲಿ ಎಂಟು ಜನ ಹೈದರಾಬಾದಿಗೆ ಸೇರಿದವರಾಗಿದ್ದಾರೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+