Get Updates
Get notified of breaking news, exclusive insights, and must-see stories!

ಪಾ.ವೆಂ, ನಾಡಿಗೇರರ ಸ್ಮರಿಸಿ, ನಕ್ಕು ನಗಿಸಿದ ಹಾಸ್ಯೋತ್ಸವ-2 ಕೆ

ಬೆಂಗಳೂರು : ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ.... ಎಂದಿದ್ದರು ಡಿ.ವಿ.ಜಿ. ಇನ್ನೊಬ್ಬರನ್ನು ನಗಿಸಿ, ಸಂತೋಷ ಪಡಿಸುವುದು ಸುಲಭವೇನಲ್ಲ. ಕನ್ನಡದ ಕೆಲವು ಸಾಹಿತಿಗಳು ಈ ಸಾಹಸ ಮಾಡಿದ್ದಾರೆ. ಯಶಸ್ವಿಯೂ ಆಗಿದ್ದಾರೆ. ಇಂತಹ ಸಾಹಸಿ ಸಾಹಿತಿಗಳ ಸಾಲಿನ ಪಾ.ವೆಂ. ಹಾಗೂ ನಾಡಿಗೇರ್‌ ಕೃಷ್ಣರಾಯರನ್ನು ಸ್ಮರಿಸಿ ನಗರದಲ್ಲಿ ಸೋಮವಾರ ನಡೆದ ಹಾಸ್ಯೋತ್ಸವ 2000 ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಬರಹಗಾರರಾದ ಶ್ರೀನಿವಾಸ ಹಾವನೂರ್‌, ಅ.ರಾ. ಮಿತ್ರ, ಅಶ್ವತ್ಥ್‌ ನಾರಾಯಣ್‌, ವೈ.ಎನ್‌. ಗುಂಡೂರಾವ್‌, ಬೇಲೂರು ರಾಮಮೂರ್ತಿ ಅವರು ಪಾವೆಂ ಹಾಗೂ ನಾಡಿಗೇರರ ನಗೆಹನಿಗಳನ್ನು ಹೇಳಿದಾಗ ನಗೆಯ ಅಲೆ. ಆ ಆಲೆಯ ಒಂದೆರಡು ಸ್ಯಾಂಪಲ್‌ ಇಲ್ಲಿದೆ.

ಅಯ್ಯಂಗಾರಿ ಸೀರೆ : ಅಲ್ಲ ದುಶ್ಯಾಸನ ದ್ರೌಪತಿಯ ಸೀರೆನ ತುಂಬಿದ ಸಭೇಲಿ ಎಳೆದ ಅಂತಾರಲ್ಲ. ಆ ದ್ರೌಪತಿ ತಮಿಳು ನಾಡಿನ ಅಯ್ಯಂಗಾರ ಹೆಂಗಸರ ಥರ ಸೀರೆ ಉಟ್ಟಿದ್ದಿದ್ರೆ ದುಶ್ಯಾಸನ ಎಲ್ಲಿಂದ ಸೀರೇ ಎಳೆಯೋದು ಅಂತ ಹುಡುಕೇ ಸುಸ್ತು ಆಗ್ತಿದ್ದ - ಪಾವೆಂ.

ಹೀರಾಲಾಲ್‌ : ಕರ್ನಾಟದ ಜನ ತುಂಬಾ ಉದಾರಿಗಳು, ಎಲ್ಲ ಭಾಷೆಯವರನ್ನೂ ಅವರ ಭಾಷೆಯಲ್ಲೇ ಸ್ವಾಗತಿಸ್ತಾರೆ. ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರೋರು. ಬರೋವಾಗ ಹರಕ್‌ಮಲ್‌ ಚಿರಕ್‌ಲಾಲ್‌ ಆಗಿ ಬರ್ತಾರೆ. ಆದ್ರೆ ಅವರು ಇಲ್ಲಿಂದ ಹೋಗೋವಾಗ ಸೋನಾಲಾಲ್‌ ಹೀರಾಲಾಲ್‌ ಆಗಿ ಹೋಕ್ತಾರೆ - ನಾಡಿಗೇರ್‌

ಪಾರ್ವತಿ - ಗಣೇಶ : ಸ್ನಾನಕ್ಕೆ ಹೋಗಕ್ಕೆ ಮುಂಚೆ ಪಾರ್ವತಿ ಬಾಗಿಲು ಕಾಯಲು ತನ್ನ ಮೈ ಬೆವರಿನಲ್ಲಿ ಗಣಪತಿನ ಸೃಷ್ಟಿಸಿದಳಂತೆ. ಅಬ್ಬಬ್ಬಾ.. ಒಬ್ಬ ಬಾಲಕನನ್ನೇ ಸೃಷ್ಟಿಸುವಷ್ಟು ಕೊಳೆ ಪಾರ್ವತಿ ಮೈಯಲ್ಲಿ ಇತ್ತು ಅಂದ ಮೇಲೆ, ಆಕೆ ಸ್ನಾನ ಮಾಡಿ ಅದೆಷ್ಟು ವರ್ಷ ಆಗಿತ್ತಪ್ಪ.... - ಪಾವೆಂ

ಕೈ ಹಿಡಿದ ವೈದ್ಯ : ವೈದ್ಯರೊಬ್ಬರು ಮದುವೆ ಆಗ್ತಿದ್ರು, ಸಪ್ತಪದಿ ತುಳಿಯೋವಾಗ, ಅಗ್ನಿಕುಂಡ ಸುತ್ತೋವಾಗ ಪತ್ನಿಯ ಕೈ ಹಿಡಿದರು. ತಕ್ಷಣವೇ (ಸದಾ ನಾಡಿ ಹಿಡಿದ ತಕ್ಷಣ ನಾಲಿಗೆ ನೋಡ್ತಾ ಇದ್ದ ಡಾಕ್ಟ್ರು) ಹೇಳಿದ್ರು ಎಲ್ಲಿ ನಾಲಿಗೆ ತೋರ್ಸು . - ನಾಡಿಗೇರ್‌

ಹೀಗೆ ಹತ್ತಾರು ನಗೆಹನಿಗಳು, ನಗೆಗವನಗಳು... ಜಯನಗರದ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಈ ಇಬ್ಬರು ಧೀಮಂತ ಹಾಸ್ಯ ಸಾಹಿತಿಗಳ ಸ್ಮರಣೆ, ಆ ಸಾಹಿತಿಗಳ ಅನುಭವದ ನುಡಿಗಳು.... ಅದರಲ್ಲೊಂದು...

ಟ್ರೆೃನ್‌ನಲ್ಲಿ ನಾಡಿಗೇರ್‌ : ನಾಡಿಗೇರ್‌ ಒಮ್ಮೆ ಟ್ರೆೃನಲ್ಲಿ ಹೋಕ್ತಾ ಇದ್ರಂತೆ. ಅದೂ ಫಸ್ಟ್‌ಕ್ಲಾಸ್‌ನಲ್ಲಿ.... ಸಂಪ್ರದಾಯವಾದಿ ಅಯ್ಯಂಗಾರ್‌ ಒಬ್ರೂ ಆ ಬೋಗಿಲಿದ್ರು. ಪ್ರತಿ ಸ್ಟೇಷನ್‌ ಬಂದಾಗ್ಲೂ ಅಯ್ಯಂಗಾರ್ರು, ಕಿಟಕಿಯಿಂದ ತಲೆ ಹೊರಗೆ ಹಾಕಿ ಬಗ್ಗೆ ನೋಡ್ತಾ ಇದ್ರು. ಸ್ವಲ್ಪ ಹೊತ್ತಿಗೆ ಅಯ್ಯಂಗಾರ್‌ ಇದ್ದ ಬೋಗಿ ಭರ್ತಿ ಆಗಿಹೋಯ್ತು. ಥರ್ಡ್‌ ಕ್ಲಾಸ್‌ ಬೋಗಿ ಹತ್ತಬೇಕಿದ್ದ ಜನಾ ಎಲ್ಲಾ ಅಯ್ಯಂಗಾರ್‌ ಇದ್ದ ಫಸ್ಟ್‌ಕ್ಲಾಸ್‌ ಬೋಗಿಗೇ ಬಂದಿದ್ರು. ಟಿಸಿಗೆ ತಲೆ ಕೆಡ್ತು ಇದ್ಯಾಕಪ್ಪಾ ಥರ್ಡ್‌ ಕ್ಲಾಸ್‌ ಬೋಗಿ ಹತ್ತಬೇಕಾದೋರೆಲ್ಲಾ ಫಸ್ಟ್‌ಕ್ಲಾಸ್‌ಗೆ ಬರ್ತಿದಾರಲ್ಲ ಅಂತ ವಿಚಾರಿಸ್ದಾ. ಆಗ ತಿಳೀತು. ಅಯ್ಯಂಗಾರ್ರು ಸ್ಟೇಷನ್ನಲ್ಲಿ ಕಿಟಕಿಯಿಂದ ಬಗ್ಗೆ ನೋಡಿದಾಗಲೆಲ್ಲಾ ಅವರ ಹಣೇ ಮೇಲಿದ್ದ ಮೂರು ನಾಮ. ಜನರನ್ನು ತಪ್ಪು ದಾರಿಗೆ ಎಳೆದಿತ್ತು.

ಅಷ್ಟು ಹೊತ್ತಿಗೆ ಎಚ್‌.ನರಸಿಂಹಯ್ಯನವರೂ ನಾಡಿಗೇರರ ಹಾಸ್ಯಪ್ರಜ್ಞೆ ಹೇಗಿತ್ತು ಎಂಬುದಕ್ಕೆ ಒಂದೆರಡು ಉದಾಹರಣೆ ನೀಡಿದರು... ಭಿಕ್ಷಾಟನೆ ನಿಷೇಧಿಸಿದ್ದ ಕಾಲ ಅದು....

ಶ್ರಾವಣ ಶನಿವಾರ : ನಾಡಿಗೇರರ ಪುಟ್ಟ ಮಕ್ಕಳು ಶ್ರಾವಣ ಶನಿವಾರ ಕೈಯಲ್ಲಿ ತಂಬಿಗೆ ಹಿಡಿದು, ( ಸಂಪ್ರದಾಯದಂತೆ ಪಡಿ ಬೇಡಲು) ಸುತ್ತ ಮುತ್ತಲ 7 ಮನೆಗೆ ಭಿಕ್ಷೆಗಾಗಿ ಹೋದರಂತೆ. ಭಿಕ್ಷಾಟನೆ ನಿಷೇಧ ದಳದೋರು, ಈ ಮಕ್ಕಳನ್ನ ನೋಡಿದ್ರು, ವ್ಯಾನಲ್ಲಿ ಕೂರಿಸ್ಕಂಡು ಹೋಗೇ ಬಿಟ್ರು. ನಾಡಿಗೇರರ ಪತ್ನಿಗೆ ಕಳವಳ ಆಯ್ತು. ಕಣ್ಣೀರು ಹಾಕ್ತಾ ಮಕ್ಕಳನ್ನು ಕರಕೊಂಡು ಬನ್ನಿ, ನಿಮಗಂತೂ ಮಕ್ಕಳ ಬಗ್ಗೆ ಒಂದು ಚೂರೂ ಚಿಂತೆ ಇಲ್ಲ ಎಂದರಂತೆ. ಅದಕ್ಕೆ ನಾಡಿಗೇರರು ನನಗೆ ಮಕ್ಕಳ ಬಗ್ಗೆ ಚಿಂತೆಗಿಂತ್ಲೂ ಅವರ ಕೈಯಲ್ಲಿರೋ ತಂಬಿಗೇ ಬಗ್ಗೆನೆ ಹೆಚ್ಚು ಯೋಚ್ನೆ ಆಗ್ತಾ ಇದೆ ಎಂದರಂತೆ.

ಹೀಗೆ ಒಂದೊಂದೆ ನೆನಪಿನ ಬುತ್ತಿಗಳು ಬಿಚ್ಚಿಕೊಂಡವು. ಸಭಿಕರು ಗಂಟೆಗಟ್ಟಲೆ ನಗುವಿನ ಸಾಮ್ರಾಜ್ಯದಲ್ಲಿ ತಾವೇ ಸಾಮ್ರಾಟರಾಗಿದ್ದರು. ಹಾಸ್ಯ ಗೀತೆಗಳೂ ಮೊಳಗಿದವು. ಕಿಕ್ಕಿರಿದು ಜನ ಸೇರಿದ್ದರು. ಕಾಲಿಡಲೂ ಜಾಗ ಇಲ್ಲದ ಸ್ಥಿತಿ. ಕೆಲವರಂತೂ ಸರ್ಕಸ್‌ ಮಾಡೋ ರೀತಿಲಿ ನಿಂತು ನಕ್ಕರು. ಇಷ್ಟೇಲ್ಲಾ ಕಷ್ಟ ಆದ್ರೂ ಯಾರೂ ಅಳಲಿಲ್ಲ. ನಕ್ಕಿದ್ದೇ ನಕ್ಕಿದ್ದು.

ಇದರ ಜತೆ ಎಂ. ಕೃಷ್ಣೇಗೌಡರ ಜಾನಪದ ಹಾಸ್ಯದ ಹೊನಲು, ವ್ಯಂಗ್ಯಚಿತ್ರ, ಲಘು ಭಾಷಣ, ಹಾಸ್ಯಕೃತಿಗಳ ಬಿಡುಗಡೆ...

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+