ವಿದ್ಯಾರ್ಥಿಗಳಿಗೆ ಐಟಿ ತಿಳಿವಳಿಕೆ ಅಗತ್ಯ ಎಂದು ವಿವೇಕ್ ಕುಲಕರ್ಣಿ
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಾಜ್ಯ ಕರ್ನಾಟಕ. ದೇಶದಲ್ಲಿ ಖ್ಯಾತಿ ಗಳಿಸಿರುವ 22 ಕಂಪ್ಯೂಟರ್ ಕಂಪನಿಗಳ ಪೈಕಿ 12 ಕಂಪನಿಗಳು ಬೆಂಗಳೂರಿನಲ್ಲೇ ಇವೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಮಂಗಳವಾರ ಇಲ್ಲಿ ಹೇಳಿದ್ದಾರೆ.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ವತಿಯಿಂದ ಕಸ್ತೂರಾ ಬಾ ರಸ್ತೆಯ ಸಂಗ್ರಹಾಲಯ ಸಭಾಂಗಣದಲ್ಲಿ ಆರಂಭಗೊಂಡ 5 ದಿನಗಳ ಕಂಪ್ಯೂಟರ್ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನಕ್ಕೆ ಮುಂದಿನ ದಿನಗಳಲ್ಲಿ ಭಾರಿ ಬೇಡಿಕೆ ಬರಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿವಳಿಗೆ ಮೂಡಿಸುವುದು ಅತ್ಯಗತ್ಯ. ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.
ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ವಾಸುದೇವ ಭಟ್ ಮಾತನಾಡಿ ಸಂಸ್ಥೆ ಪ್ರತಿವರ್ಷವೂ ಇಂತಹ ಮೇಳ ಏರ್ಪಡಿಸುತ್ತದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಇನ್ನಿತರ ಭಾಗಗಳಲ್ಲೂ ಇಂತಹ ಮೇಳ ನಡೆಸುವ ಯೋಜನೆ ಇದೆ ಎಂದರು.
ಕಂಪ್ಯೂಟರ್ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತಂತ್ರಾಂಶದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವೂ ಇದೆ. ಅಲ್ಲದೆ ಕಂಪ್ಯೂಟರ್ನಲ್ಲಿ ಚಿತ್ರ ಬರೆಯುವ ಸ್ಪರ್ಧೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳೂ ನಡೆಯಲಿವೆ.