ಲಿಂಗಾಂಬುಧಿಯ ಪಕ್ಷಿಗಳ ಪ್ರಾಣಪಕ್ಷಿಗೆ ಯಮಪಾಶವಾದ ಸೋಂಕು ರೋಗ
ಮೈಸೂರು : ಇಲ್ಲಿನ ಲಿಂಗಾಂಬುಧಿ ಕೆರೆಯಲ್ಲಿ ಪಕ್ಷಿಗಳ ಅಸಹಜ ಸಾವಿಗೆ ಸೋಂಕು ರೋಗ ಕಾರಣವಿರಬಹುದೆಂದು ಬೆಂಗಳೂರಿನ ಪಶು ಆರೋಗ್ಯ ಮತ್ತು ಪಶುಜೀವನ ಅಧ್ಯಯನ ಸಂಸ್ಥೆ ಪ್ರಯೋಗಾಲಯದ ಪ್ರಾಥಮಿಕ ತನಿಖೆಗಳು ತಿಳಿಸಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ಜಯಕುಮಾರ್ ಭಾನುವಾರ ಹೊರಡಿಸಿರುವ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯೋಗಾಲಯವು ಹೆಚ್ಚಿನ ಪರೀಕ್ಷೆಗಳಲ್ಲಿ ತೊಡಗಿದೆ. ಪಕ್ಷಿಗಳ ಸೋಂಕಿಗೆ ಕಾರಣವಾದ ಜೀವಾಣುವಿನ ಸಂತಾನಾಭಿವೃದ್ಧಿಯಾಗದಂತೆ ಎಚ್ಚರಿಕೆ ಕ್ರಮ ವಹಿಸಲು ಪ್ರಯೋಗಾಲಯ ಸೂಚಿಸಿದೆ. ಇದಕ್ಕಾಗಿ ಲಿಂಗಾಂಬುಧಿ ಕೆರೆ ಅಂಗಳದಲ್ಲಿ ಸೂಕ್ತ ಸಿಬ್ಬಂದಿಯನ್ನು ನೇಮಿಸಿದ್ದು ಲಭ್ಯವಿರುವ ಎಲ್ಲಾ ಮಾಹಿತಿ ಸಂಗ್ರಹಿಸಲು ಅನುಕೂಲವಾಗುವಂತೆ ಕೆರೆಯಲ್ಲಿ ಓಡಾಡಲು ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದು ಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗಾಂಬುಧಿ ಕೆರೆಯಲ್ಲಿ ಇದುವರೆಗೆ 40 ಕ್ಕೂ ಹೆಚ್ಚು ಪಕ್ಷಿಗಳು ನಿಗೂಢ ರೀತಿಯಲ್ಲಿ ಸತ್ತಿದ್ದು , ಪಕ್ಷಿಗಳ ಸಾವಿಗೆ ಪರಿಸರ ಪ್ರಿಯರು ಅಪಾರ ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು. ಪಕ್ಷಿಗಳ ಸಾವಿಗೆ ಕ್ಲೋಸ್ಟ್ರಿಡಂ ಬೊಯಾಲಿಯಂ ಎನ್ನುವ ಬ್ಯಾಕ್ಟೀರಿಯಾ ಕಾರಣ ಇರಬಹುದೆಂದು ವಿಜ್ಞಾನಿಗಳು ಶಂಕಿಸಿದ್ದಾರೆ.
(ಇನ್ಪೊ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...