Get Updates
Get notified of breaking news, exclusive insights, and must-see stories!

ಫ್ರಾನ್ಸ್‌ನಲ್ಲೊಂದು ವಿದ್ಯಾರ್ಥಿಗಳ ‘ಟ್ರಬಲ್‌ಶೂಟ್‌’ ಪಾರ್ಟಿ

*ರಣವೀರ್‌ ನಾಯರ್‌

ಪ್ಯಾರಿಸ್‌ : ನಲವತ್ತೊಂದು ವರ್ಷಗಳ ಕಾಲ ಸೌದಿಯಲ್ಲಿ ಬದುಕು ಸವೆಸಿ, ಎನ್‌ಆರ್‌ಐಗಳ ಕಷ್ಟಗಳನ್ನು ಜೀರ್ಣಸಿಕೊಂಡು, ಅದರ ನಿವಾರಣೆಗೆ ಭಾರತದ ಸಂಸತ್ತಿನಲ್ಲಿ ಎನ್‌ಆರ್‌ಐಗಳಿಗೂ ಪ್ರಾತಿನಿಧ್ಯ ಕೊಡಬೇಕೆಂದು ಮನವಿ ಮಾಡಿದ್ದ ಒಬ್ಬ ಹಿರಿಯ ಬಿಸಿನೆಸ್‌ ಮನ್‌ ಜೀವನ ಚಿತ್ರವನ್ನು ಇತ್ತೀಚೆಗಷ್ಟೆ ಕೊಟ್ಟಿದ್ದೆವು. ಮದುವೆ ಆಗುವುದರಿಂದ ಹಿಡಿದು ಮಸಣಕ್ಕೆ ಹೋಗೋವರೆಗೂ ಎನ್‌ಆರ್‌ಐಗಳು ಅನುಭವಿಸುವ ಕಷ್ಟಗಳನ್ನು ನಾವು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈಗ ಫ್ರಾನ್ಸ್‌ ಈ ವಿಷಯದಲ್ಲಿ ಕೊಂಚ ಎಚ್ಚೆತ್ತುಕೊಂಡಿದೆ. ...

ಇಲ್ಲಿನ ಶಿಕ್ಷಣ ಸಚಿವ ಜಾಕ್‌ ಲ್ಯಾಂಗ್‌ ಅವರಿಗೆ ಧನ್ಯವಾದಗಳು. ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು, ಸಾಹಿತಿಗಳು, ಕಲಾಕಾರರೆಲ್ಲಾ ಬುಧವಾರ ಒಂದೆಡೆ ಸೇರಿದ್ದರು. ಅದೊಂದು ಸತ್ಕಾರ ಕೂಟ. ಒಂದಿಷ್ಟು ಹರಟೆ ಕೊಚ್ಚಿ, ವಿಸ್ಕಿ ಹಿಗ್ಗಿ, ಸ್ನ್ಯಾಕ್‌ ಕುಟುಮರಿಸಿ ಧನ್ಯೋಸ್ಮಿ ಎಂದು ಮುಗಿಸಿಬಿಡುವ ಪೇಲವ ಕೂಟ ಅದಲ್ಲ ; ಓದು- ಬರೆಹ, ಹವ್ಯಾಸ, ಸಂಶೋಧನೆ ಇಂಥ ಮಹತ್ವಾಂಕಾಂಕ್ಷೆ ಹೊತ್ತು ಬಂದ ಭಾರತೀಯ ಸಮುದಾಯದ ಕಷ್ಟ- ಕಾರ್ಪಣ್ಯಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ. ಭಾರತೀಯರ ಸಂಸ್ಕೃತಿ- ಸೊಗಡು, ಕಳಕಳಿಗಳನ್ನು ಮನಗಾಣುವ ಉದ್ದಿಶ್ಯದ ವಿಶೇಷ ಕೂಟ. ಬಹುಶಃ ಜಗತ್ತಿನಲ್ಲೇ ಇಂಥ ಕೂಟ ಹಿಂದೆಂದೂ ನಡೆದಿಲ್ಲ !

‘ಈ ಕೂಟವನ್ನು ನಾನು ಆಯೋಜಿಸಲು ಮುಖ್ಯ ಕಾರಣ, ಭಾರತೀಯ ಸಮುದಾಯದೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು, ಅವರ ಸಂಸ್ಕೃತಿ- ಆಸಕ್ತಿಗಳನ್ನು ತಿಳಿಯುವುದು, ಫ್ರಾನ್ಸ್‌ನಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳುವುದು’ ಎಂದು ಲ್ಯಾಂಗ್‌ ಕೂಟ ಪ್ರಾರಂಭವಾಗುವ ಮುನ್ನ ಹೇಳಿದರು.

ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಕನ್ವಾಲ್‌ ಸೈಬಲ್‌ ಸೇರಿದಂತೆ ಸುಮಾರು 100 ಭಾರತೀಯರು ಕೂಟದಲ್ಲಿ ಹಾಜರಿದ್ದರು. ಅವರಲ್ಲಿ ಪ್ರಸಿದ್ಧ ಶಿಕ್ಷಣ ತಜ್ಞ ಬಿಕಾಸ್‌ ಸನ್ಯಾಲ್‌ ಕೂಡ ಒಬ್ಬರು. ಕೂಟ ಆಯೋಜಿಸಲು ಓಡಾಡಿದವರಲ್ಲಿ ಸನ್ಯಾಲ್‌ ಪ್ರಮುಖರು. ಮೇಯ್ಸನ್‌ ಡಿ ಇಂಡೆ (ಭಾರತೀಯರ ಒಕ್ಕೂಟ) ನಿರ್ದೇಶಕರೂ ಆಗಿರುವ ಸನ್ಯಾಲ್‌, ಒಕ್ಕೂಟದ ಮೂಲಕ ಸಂಶೋಧನೆಗೆ ಬರುವ ಭಾರತೀಯರಿಗೆ ತಂಗುದಾಣ ಒದಗಿಸುವುದರ ಜೊತೆಗೆ ಅವರ ಮಾಹಿತಿ ಸಂಗ್ರಹಣೆಗೂ ಕೈ ಹಚ್ಚುತ್ತಿದ್ದಾರೆ.

ಇಲ್ಲಿ--ದೆ ಅವ-ಕಾ-ಶ ಜೊತೆ-ಗೆ ಸರ್ಕಾ-ರ-ದ ನೆರ-ವು

ಭಾರತದ ವಿದ್ಯಾರ್ಥಿಗಳು ಕಲಿಯಲು ನಮ್ಮಲ್ಲಿ ಮುಕ್ತ ಅವಕಾಶವಿದೆ. ಇಲ್ಲಿನ ಸರ್ಕಾರವೂ ಇದಕ್ಕೆ ಕೇಳಿದಷ್ಟು ನೆರವು ನೀಡುತ್ತಿದೆ. ಕಲಿಯುವ ತುಡಿತವಿರುವ ಭಾರತೀಯ ವಿದ್ಯಾರ್ಥಿಗಳಿಗೆ ಇದನ್ನು ಮನವರಿಕೆ ಮಾಡಿಸಲು ಭಾರತದಲ್ಲೂ ಕೆಲ ಶಿಬಿರಗಳನ್ನು ಮಾಡಬೇಕೆಂದಿದ್ದೇವೆ ಎಂದು ಲ್ಯಾಂಗ್‌ ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರಗಳಲ್ಲಿ ಫ್ರಾನ್ಸ್‌ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಮ್ಮ ನಿರೀಕ್ಷೆಯಷ್ಟು ಭಾರತೀಯರು ಇದನ್ನು ಅರಿತಿಲ್ಲ. ಈ ಕಾರಣಕ್ಕಾಗೇ ಭಾರತೀಯ ವಿದ್ಯಾರ್ಥಿಗಳಿಗೆ ಗ್ರ್ಯಾಂಟ್‌ ಮುಂತಾದ ಸವಲತ್ತು ಒದಗಿಸುವ ಬಗ್ಗೆ ಸರ್ಕಾರ ಆಸಕ್ತಿ ತೋರುತ್ತಿದೆ. ಭಾರತ ಮತ್ತು ಫ್ರಾನ್ಸ್‌ ನಡುವೆ ಸಂಸ್ಕೃತಿಯ ಸೇತುವೆ ಕಟ್ಟುವುದು ನಮ್ಮ ಮಹದಾಸೆ ಎಂದು ಲ್ಯಾಂಗ್‌ ಹೇಳುವಾಗ ಅವರಲ್ಲಿ ದೊಡ್ಡ ಕಳಕಳಿ ವ್ಯಕ್ತವಾಯಿತು.

ಇಲ್ಲಿ ಕಲಿಯಲು ಬರುವ ವಿದೇಶೀಯರಿಗೆ ಭಾಷೆಯದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ತೊಂದರೆಯನ್ನು ಸಚಿವಾಲಯ ಮನಗಂಡಿದ್ದು, ವಿಶ್ವವಿದ್ಯಾಲಯಗಳ ಯಾವುದೇ ಕೋರ್ಸಿನ ಮೊದಲ ವರ್ಷದ ಬೋಧನೆಯನ್ನು ಎರಡು ಭಾಷೆಗಳಲ್ಲಿ ನೀಡುವ ನಿರ್ಧಾರ ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ ಎಂದರು.

ಜಲ ನಿರ್ವಹಣೆ, ನಗರ ನಿರ್ವಹಣೆ, ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅನುಕೂಲವಾಗುವ ಉದ್ದಿಶ್ಯದಿಂದ ಫ್ರಾನ್ಸ್‌ ಸದ್ಯದಲ್ಲೇ ಭಾರತದೊಡನೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದದಿಂದ ಎರಡೂ ದೇಶಗಳ ಪ್ರಯೋಗಾಲಯಗಳ ನಡುವೆ ಸುಲಭ ಸಂವಹನೆ ಸಾಧ್ಯವಾಗಲಿದ್ದು, ಸಂಶೋಧನೆಗಳು ಶೀಘ್ರವಾಗಿ ಮುಗಿಯಲಿದೆ ಎಂದು ಲ್ಯಾಂಗ್‌ ಹೇಳಿದರು.

ಬಾಲಂಗೋಚಿ : ಬೇರೇ ದೇಶಗಳೂ ವ್ಯಾಪಾರದ ಒಂದೇ ಉದ್ದೇಶ ಬಿಟ್ಟು, ಸಂಪತ್ತು ಹೆಚ್ಚಿಸಲು ಜೀವ ತೇಯುತ್ತಿರುವ ಎನ್‌ಆರ್‌ಐಗಳ ಸಮಸ್ಯೆ ಮನಗಾಣುವ ಬಗೆಗೆ ಚಿಂತಿಸಲಿ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+