ಪವರ್ ಷಾಕ್ : ಶೇ. 17ರಷ್ಟು ದರ ಏರಿಕೆಗೆ ಕೆಇಆರ್ಸಿ ಅಸ್ತು
ಬೆಂಗಳೂರು : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರವನ್ನು ಶೇ. 17ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಕೆಪಿಟಿಸಿಎಲ್ಗೆ ಈ ಕುರಿತು ಮಂಗಳವಾರ ಆದೇಶ ಕೊಟ್ಟಿದೆ.
ಕೆಇಆರ್ಸಿ ಅಧ್ಯಕ್ಷ ಫಿಲಿಪೋಸ್ ಮಥಾಯ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್ ಅವರಿಗೆ ಆದೇಶ ಪತ್ರ ನೀಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗೆಗೆ ವಿವರಣೆ ಕೊಟ್ಟರು. ವಿದ್ಯುತ್ ದರದಲ್ಲಿ ಇದ್ದ ಅಸಮತೋಲನವನ್ನು ಸರಿಪಡಿಸಲು ಈ ತೀರ್ಮಾನಕ್ಕೆ ಬರಲಾಗಿದ್ದು, ಕೆಲ ವರ್ಗದ ಜನರಿಗೆ ಮಾತ್ರ ಇದು ಸ್ವಲ್ಪ ಹೊರೆಯಾಗಲಿದೆ ಅಷ್ಟೆ ಎಂದು ಮಥಾಯ್ ಹೇಳಿದರು.
ಆಯೋಗದ ನಿರ್ಧಾರದಿಂದ ನನಗೆ ಮುಕ್ಕಾಲು ಪಾಲು ಸಂತೋಷವಾಗಿದೆ. ಇದರಿಂದ ಈ ವಿತ್ತ ವರ್ಷದಲ್ಲಿ 147 ಕೋಟಿ ರುಪಾಯಿ ಸಂಗ್ರಹವಾಗಲಿದೆ. ಸರ್ಕಾರ ಕೊಡಬೇಕಾದ 524 ಕೋಟಿ ರುಪಾಯಿ ಸಬ್ಸಿಡಿ ದೊರೆಯದ ಕಾರಣ ನಿಗಮಕ್ಕೆ ಹೊರೆಯಾಗಿದೆ ಎಂದು ಬಳಿಗಾರ್ ತಿಳಿಸಿದರು.
ನಿಗಮಕ್ಕೆ 600 ಕೋಟಿ ಹೆಚ್ಚು ಆದಾಯ : ನಿಗಮದ ಪ್ರಸ್ತಾವನೆಯ ಪ್ರಕಾರ ವಿದ್ಯುತ್ ದರದಲ್ಲಿ ವಾರ್ಷಿಕ 800 ಕೋಟಿ ರುಪಾಯಿ ಹೆಚ್ಚಳವಾಗಬೇಕಿತ್ತು. ಆಯೋಗ ಕೈಗೊಂಡಿರುವ ತೀರ್ಮಾನದಿಂದ ದರದಲ್ಲಿ ವಾರ್ಷಿಕ 600 ಕೋಟಿ ರು. ಹೆಚ್ಚಾಗಲಿದೆ. ಅಸಮರ್ಪಕ ಸಬ್ಸಿಡಿ ವ್ಯವಸ್ಥೆ, ಅಸಮತೋಲಿತ ವಿದ್ಯುತ್ ದರ ನಿಗದಿ ಬಹು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವುದೇ ವಿದ್ಯುತ್ ಕ್ಷೇತ್ರ ರೋಗಗ್ರಸ್ತವಾಗಲು ಕಾರಣವಾಗಿದೆ ಎಂದು ಮಥಾಯ್ ವಿಷಾದ ವ್ಯಕ್ತಪಡಿಸಿದರು.
ಪ್ರಸರಣೆ ಮತ್ತು ವಿತರಣೆಯಲ್ಲಿ ಪ್ರತಿಶತ 36.5ರಷ್ಟು ನಷ್ಟ ಉಂಟಾಗುತ್ತಿದೆ ಎಂದು ನಿಗಮ ಪ್ರಸ್ತಾವನೆಯಲ್ಲಿ ಹೇಳಿತ್ತು. ಆಯೋಗ ಆ ನಷ್ಟವನ್ನು ಶೇ. 31ರಷ್ಟಕ್ಕೆ ಇಳಿಸಿ, ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ. ಅಲ್ಲದೆ ಈ ನಷ್ಟದ ಪ್ರಮಾಣವನ್ನು ಈ ವರ್ಷ ಶೇ.2ರಷ್ಟು ಹಾಗೂ ಮುಂದಿನ ವರ್ಷ ಶೇ.5ರಷ್ಟು ಇಳಿಸುವಂತೆ ನಿಗಮಕ್ಕೆ ತಿಳಿಸಲಾಗಿದೆ ಎಂದರು.
ಎಇಎಚ್ ಗ್ರಾಹಕರಿಗೆ ಸೋಡಿ : ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಗ್ರಾಹಕರಿಗೆ ಹೊರೆಯಾಗದಂತೆ ಎಚ್ಚರ ವಹಿಸಲಾಗಿದೆ. ಈಗ ಯೂನಿಟ್ಗೆ 7.90 ರುಪಾಯಿ ಕಟ್ಟುತ್ತಿರುವ ಟೀ ಅಂಗಡಿ ಮುಂತಾದ ಸಣ್ಣ ಪ್ರಮಾಣದ ವಾಣಿಜ್ಯ ಬಳಕೆದಾರರ ಪ್ರತಿ ತಿಂಗಳ ಕನಿಷ್ಠ ದರವನ್ನು 70 ರುಪಾಯಿಯಿಂದ 35 ರುಪಾಯಿಗೆ ಇಳಿಸಲಾಗಿದೆ. ಎಇಎಚ್ ಗ್ರಾಹಕರಿಗೆ ಪ್ರತಿ ಕಿಲೋ ವ್ಯಾಟ್ಗೆ 5 ರುಪಾಯಿ ಹಾಗೂ ಗ್ರಾಮೀಣ ಉದ್ಯಮ ಗ್ರಾಹಕರಿಗೆ ಒಂದು ಹಾರ್ಸ್ಪವರ್ಗೆ 10 ರುಪಾಯಿ, ಸೋಲಾರ್ ವಾಟರ್ ಹೀಟರ್ ಬಳಸುವ ಗ್ರಾಹಕರಿಗೆ ಪ್ರತಿ ಯುನಿಟ್ಗೆ 15 ಪೈಸೆ ಸೋಡಿ ನೀಡಲು ಆಯೋಗ ಶಿಫಾರಸ್ಸು ಮಾಡಿದೆ ಎಂದು ಮಥಾಯ್ ವಿವರಿಸಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...