ಜನಸೇವೆಗೆ ಬದ್ಧರಾಗಿ : ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಕೃಷ್ಣ ಕರೆ
ಬೆಂಗಳೂರು : ಜಾಗತೀಕರಣ ಪ್ರಕ್ರಿಯೆಯ ಪಥದಲ್ಲಿರುವ ದೇಶದಲ್ಲಿ ಆರೋಗ್ಯಕರ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಅಧಿಕಾರಿವರ್ಗ ತನ್ನನ್ನು ತಾನು ದುಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ವ್ಯವಸ್ಥೆಯಲ್ಲಿ ಯಾವುದೇ ಅರ್ಥಪೂರ್ಣ ಬದಲಾವಣೆ ಅಸಾಧ್ಯ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜಕಾರಣಿಗಳಿಗೆ ಐದು ವರ್ಷಗಳಿಗೊಮ್ಮೆ ಜನಸೇವೆ ಜವಾಬ್ದಾರಿ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಅಧಿಕಾರಿಗಳು ಕೆಲವು ಕರ್ತವ್ಯಗಳಿಗೆ ಬದ್ಧರಾಗಿರುತ್ತಾರೆ ಎಂದರು. ನಾಗರಿಕ ಸೇವೆಗಳ ನಿಯಮಗಳನ್ನು ಪಾರದರ್ಶಕ ಹಾಗೂ ಜವಾಬ್ದಾರಿಯುತಗೊಳಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಕೃಷ್ಣ ಹೇಳಿದರು.
ಮಂಡ್ಯ ಜಿಲ್ಲೆಯ ಹಂಗರಹಳ್ಳಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಜೀತ ಪ್ರಕರಣವು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರನ್ನು ತಂದಿದೆ. ಶಾಸನ ಬಳಕೆಯಲ್ಲಿ ನ ವೈಫಲ್ಯ ಇಂಥಾ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯ ಪಟ್ಟರು.
ಆಶ್ರಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಫಲಾನುಭವಿಗಳನ್ನು ಗೊತ್ತು ಪಡಿಸಲು ನಿಗದಿಪಡಿಸಿರುವ ಡಿಸೆಂಬರ್ 25 ರ ಗಡುವನ್ನು ಸರ್ಕಾರ ವಿಸ್ತರಿಸುವುದಿಲ್ಲ . ಆನಂತರ ಆಶ್ರಯ ಕಮಿಟಿಯ ಅಧ್ಯಕ್ಷರಾಗಿರುವ ಶಾಸಕರೊಡಗೂಡಿ ಜಿಲ್ಲಾಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವರು ಎಂದರು.
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾದುದು ಜಿಲ್ಲಾ ಪ್ರಾಧಿಕಾರಗಳ ಕರ್ತವ್ಯ. ಬರಗಾಲ ಪೀಡಿತ ಹಳ್ಳಿಗಳಲ್ಲಿ ಬೇಸಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಆಯಾ ಜಿಲ್ಲೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ ಕೃಷ್ಣ , ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಲು ಸರ್ಕಾರ ಅನೇಕ ಕ್ರಮಗಳನ್ನು ಹಮ್ಮಿಕೊಂಡಿದ್ದು ಆ ನಿಟ್ಟಿನಲ್ಲಿ ವಿಶ್ವಬ್ಯಾಂಕ್ನ 12 ಸಾವಿರ ಕೋಟಿ ರುಪಾಯಿ ನೆರವನ್ನು ಬಳಸಿಕೊಳ್ಳಲಾಗುವುದು ಎಂದರು.
(ಯುಎನ್ಐ)