ಅಂಚೆ ನೌಕರರ ಮುಷ್ಕರ ಕಾನೂನು ಬಾಹಿರ - ಕಾರ್ಮಿಕ ಆಯೋಗ
ನವದೆಹಲಿ : ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಅಂಚೆ ನೌಕರರ ಮುಷ್ಕರ ಕಾನೂನು ಬಾಹಿರವಾಗಿದ್ದು , ಮುಷ್ಕರ ನಿರತ ಸುಮಾರು ಆರು ಲಕ್ಷ ಮಂದಿ ನೌಕರರು ಕೈಗಾರಿಕಾ ಕಾನೂನು ಕಾಯ್ದೆಯಡಿ ಶಿಕ್ಷೆಗೆ ಅರ್ಹರು ಎಂದು ಎಂದು ಕಾರ್ಮಿಕ ಆಯೋಗ ಹೇಳಿದೆ.
ಈ ಕುರಿತು ನೌಕರರ ಯೂನಿಯನ್ನ್ನು ಉದ್ದೇಶಿಸಿದ ಕಾರ್ಮಿಕ ಆಯೋಗದ ಅಧ್ಯಕ್ಷ ಜಿ.ಆರ್. ಮಾಜ್ಹೀ ಅವರು, ನಾಳೆಯಿಂದಾದರೂ ಅಂಚೆ ನೌಕರರು ಕೆಲಸಕ್ಕೆ ಹಾಜರಾಗಬಹುದು ಎಂಬ ಭರವಸೆ ಇಟ್ಟುಕೊಂಡಿರುವುದಾಗಿ ಹೇಳಿದರು.
ಬುಧವಾರದಂದು ಸಂಪರ್ಕ ಸಚಿವ ರಾಮ್ವಿಲಾಸ್ ಪಾಸ್ವಾನ್, ಅಂಚೆ ನೌಕರರು ಮುಷ್ಕ-ರ ಕೈಬಿಡಬೇಕು , ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದೂ ಹೇಳಿದ್ದರು. ಆದರೂ ಮುಷ್ಕರ ನಿರತರ ಮೇಲೆ ಎಸ್ಮಾ ಜಾರಿ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು. ಈ ಕುರಿತು ಕಾನೂನು ಸಚಿವಾಲಯದೊಂದಿಗೆ ಮಾತುಕತೆ ಮುಂದುವರೆದಿದ್ದು, ಹೈಕೋರ್ಟ್ ಆದೇಶವನ್ನು ಪಾಲಿಸಲಾಗುವುದು ಎಂದು ಅವರು ಹೇಳಿದರು.
ದೆಹಲಿ ಹೈಕೋರ್ಟ್ನಲ್ಲಿ ಅಜಿತ್ ಪಸಾಯತ್ ಮತ್ತು ಡಿ.ಕೆ ಜೈನ್ ಅವರ ವಿಭಾಗೀಯ ಪೀಠ, ಶುಕ್ರವಾರದೊಳಗೆ ಅಂಚೆ ನೌಕರರ ಮುಷ್ಕರವನ್ನು ಇತ್ಯರ್ಥಗೊಳಿಸುವಂತೆ ಸರಕಾರಕ್ಕೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸರಕಾರದ ಯಾವುದೇ ಕ್ರಮಗಳಿಗೆ ಬಗ್ಗದೆ, ತಮ್ಮ ಬೇಡಿಕೆ ಈಡೇರುವವರೆಗೆ ಧರಣಿ ನಡೆಸುವುದಾಗಿ ಮುಷ್ಕರನಿರತ ಅಂಚೆ ನೌಕರರ ಯೂನಿಯನ್ ಪ್ರಮುಖರು ಹೇಳಿದ್ದಾರೆ.
(ಯುಎನ್ಐ)