ಎಸ್. ನಿಜಲಿಂಗಪ್ಪನವರ ಕನಸನ್ನು ನನಸುಮಾಡಲು ಸರ್ಕಾರ ಬದ್ಧ - ಕೃಷ್ಣ
ಬೆಂಗಳೂರು : ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಹಿರಿಯ ರಾಜಕೀಯ ಮುತ್ಸದ್ಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಕನಸನ್ನು ನನಸಾಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಎಸ್. ನಿಜಲಿಂಗಪ್ಪ ನವರ 99ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ಯೋಜನೆಯನ್ನು ಅತಿ ಶೀಘ್ರದಲ್ಲೇ ಅನುಷ್ಠಾನಕ್ಕೆ ತರುವ ಮೂಲಕ ನಿಜಲಿಂಗಪ್ಪನವರ ಕನಸನ್ನು ನನಸು ಮಾಡಲಾಗುವುದು ಎಂದರು.
ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಿಲ್ಲೆಗೆ ನೀರು ಒದಗಿಸುವ ಯೋಜನೆ ಪೂರ್ಣಗೊಳಿಸಲಾಗಲಿಲ್ಲ ಎಂದು ನಿಜಲಿಂಗಪ್ಪನವರು ಸದಾ ಕೊರಗುತ್ತಿದ್ದರು ಎಂದ ಕೃಷ್ಣ ಅವರ ಕನಸನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು. ಎಸ್ಸೆನ್ ಅವರ ಬಗ್ಗೆ ಪುಸ್ತಕ ಬರೆಯುವ ಆಸೆಯೂ ತಮಗಿದೆ ಎಂದು ಕೃಷ್ಣ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಎಸ್. ನಿಜಲಿಂಗಪ್ಪ ರಾಷ್ಟ್ರೀಯ ಟ್ರಸ್ಟ್ ನಗರದ ಗಾಂಧೀ ಭವನದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಹೆಗಡೆ ಅವರು, ನಿಜಲಿಂಗಪ್ಪನವರ ನೂರನೇ ಹುಟ್ಟುಹಬ್ಬವನ್ನು ಆಚರಿಸುವ ಯೋಗವನ್ನು ರಾಜ್ಯ ಕಳೆದುಕೊಂಡಿತು ಎಂದರು. ನಿವೃತ್ತ ನ್ಯಾಯಾಧೀಶರಾದ ನಿಟ್ಟೂರು ಶ್ರೀನಿವಾಸರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಪಾಲ್ಗೊಂಡಿದ್ದರು. (ಯುಎನ್ಐ)