24ರಿಂದ ಶಿವಮೊಗ್ಗದಲ್ಲಿ ಸಂಸ್ಕೃತ ಗೃಹ ಸಮ್ಮೇಳನ
ಶಿವಮೊಗ್ಗ : ಡಿಸೆಂಬರ್ 24 ಹಾಗೂ 25ರಂದು ಶಿವಮೊಗ್ಗದಲ್ಲಿ ದಕ್ಷಿಣ ಭಾರತ ಸಂಸ್ಕೃತ ಗೃಹ ಸಮ್ಮೇಳನ ಜರುಗಲಿದೆ. ಈ ಸಮ್ಮೇಳನದಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ತಂಗಲು ಶಿವಮೊಗ್ಗದ ನೂರಾರು ಮನೆಗಳಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ, ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ನಿರ್ದೇಶಕರಾದ ಕುಟುಂಬ ಶಾಸ್ತ್ರೀ, ಸಂಸತ್ ಸದಸ್ಯರಾದ ವಿಜಯಸಂಕೇಶ್ವರ, ಸಾಹಿತಿ ನಾ. ಡಿಸೋಜಾ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು ಪಾಲ್ಗೊಳ್ಳುತ್ತಿದ್ದಾರೆ.
ಸಮ್ಮೇಳನದ ಸಿದ್ಧತೆಗಳನ್ನು ಹಾಗೂ ಕಾರ್ಯಕ್ರಮದ ಎಲ್ಲ ವ್ಯವಸ್ಥೆಗಳನ್ನೂ ನೋಡಿಕೊಳ್ಳಲು ಶಿವಮೊಗ್ಗದ ಕೈಗಾರಿಕೋದ್ಯಮಿ ಎಸ್. ರುದ್ರೇಗೌಡರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಈ ವಿಷಯವನ್ನು ಸಂಸ್ಕೃತ ಭಾರತೀಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಸತ್ಯನಾರಾಯಣ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.