ಉತ್ತರ ಕರ್ನಾಟಕ ಅಭಿವೃದ್ಧಿಗೆ 43 ಸೇತುವೆಗಳ ನಿರ್ಮಾಣ : ಧರ್ಮಸಿಂಗ್
ಗುಲ್ಬರ್ಗಾ : ಉತ್ತರ ಕರ್ನಾಟಕ ಪ್ರದೇಶದಲ್ಲಿ ಸುಮಾರು 10 ಕೋಟಿ ರುಪಾಯಿಗಳ ವೆಚ್ಚದಲ್ಲಿ 43 ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ವಿಷಯವನ್ನು ಲೋಕೋಪಯೋಗಿ ಸಚಿವರಾದ ಧರ್ಮಸಿಂಗ್ ಸೋಮವಾರ ಇಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ - ಬಿಜಾಪುರ ಮಾರ್ಗದ ಗುರುಮಿಟ್ಕಲ್ ಸಮೀಪ ಸೇತುವೆಯ ಕಾಮಗಾರಿ ಆರಂಭಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿದ ಸಚಿವರು, ಈ ಸೇತುವೆಯ ನಿರ್ಮಾಣದಿಂದ ತೆಲಂಗಾಣ ಹಾಗೂ ಮುಂಬಯಿ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಕೃಷ್ಣ ನೇತೃತ್ವದ ಸರಕಾರ ಸಂಪೂರ್ಣ ಗಮನ ಹರಿಸಿದೆ. ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಗಳ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮೂಲಸೌಕರ್ಯ ನಿಧಿಯಿಂದ ರಾಜ್ಯಕ್ಕೆ 400 ಕೋಟಿ ರುಪಾಯಿ ನೀಡಲು ನಬಾರ್ಡ್ ಕೂಡ ಒಪ್ಪಿದೆ. ಈ 400 ಕೋಟಿ ರುಪಾಯಿಗಳಲ್ಲಿ 175 ಕೋಟಿ ರುಪಾಯಿಗಳನ್ನು ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಬಳಸಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ರಸ್ತೆ ನಿಧಿಯಿಂದಲೂ ರಾಜ್ಯಕ್ಕೆ 57 ಕೋಟಿ ರುಪಾಯಿ ದೊರಕುತ್ತಿದೆ ಎಂದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಜಿಲ್ಲೆಯ ಪ್ರಮುಖ ರಸ್ತೆಯಾಗಿರುವ ಗುರುಮಿಟ್ಕಲ್ ರಸ್ತೆಯನ್ನು ಹೆದ್ದಾರಿಯ ದರ್ಜೆಗೆ ಏರಿಸಬೇಕು ಎಂದು ಅಭಿಪ್ರಾಯಪಟ್ಟರು. ಜಿ.ಪಂ. ಅಧ್ಯಕ್ಷ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಚೆನ್ನಾರೆಡ್ಡಿ ಮೊದಲಾದವರು ಹಾಜರಿದ್ದರು.