ವಿಕಲಾಂಗ ಮಗು ಹೆರುವುದಕ್ಕಿಂತ ಗರ್ಭಪಾತವೇ ಸೂಕ್ತ : ರಮಾದೇವಿ
ಬೆಂಗಳೂರು : ಅಂಗವಿಕಲ ಮಗುವಿಗೆ ಜನ್ಮ ನೀಡಿ ಜೀವನಪೂರ್ತಿ ನೋವು ಅನುಭವಿಸುವುದಕ್ಕಿಂತಲೂ ಗರ್ಭಪಾತ ಮಾಡಿಸಿಕೊಳ್ಳುವುದೇ ಸೂಕ್ತ. ಈ ವಿಧಾನ ಕಾನೂನು ಬದ್ಧವೂ ಹೌದು ಎಂದು ರಾಜ್ಯದ ರಾಜ್ಯಪಾಲರಾದ ವಿ. ರಮಾದೇವಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಭಾರತದ ಜನಗಣತಿ 2001 - ಅಂಗವಿಕಲರ ಗಣತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಾ, ಅಂಗವಿಕಲ ಮಗು ಜನಿಸಿದ ದಂಪತಿಗಳು ವೈದ್ಯರಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅವರಿಗೆ ಹುಟ್ಟುವ ಮತ್ತೊಂದು ಮಗುವೂ ಅಂಗವಿಕಲತೆಯಿಂದ ಕೂಡಿದೆ ಎಂಬುದು ಸಾಬೀತಾದರೆ ಆ ಅಂಗವಿಕಲ ಮಗುವಿಗೆ ಜನ್ಮ ನೀಡುವ ಬದಲು ಗರ್ಭಪಾತ ಮಾಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಕುಟುಂಬದಲ್ಲಿರುವ ಅಂಗವಿಕಲರ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಜನಗಣತಿದಾರರಿಗೆ ಮಾಹಿತಿ ನೀಡಬೇಕು ಎಂದೂ ರಮಾದೇವಿ ಜನತೆಯಲ್ಲಿ ಮನವಿ ಮಾಡಿದರು. 2001ರ ಸಾಲಿನ ಜನಗಣತಿಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಅಂಕಣವೇ ಇದ್ದು, ಅಂಗವಿಕಲರ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಅವರ ಗಣತಿ ಅತ್ಯಗತ್ಯವಾಗಿದೆ ಎಂದೂ ಹೇಳಿದರು.
ಅಂಗವಿಕಲ ಮಕ್ಕಳನ್ನು ಸಹಜ ಪ್ರೀತಿಯಿಂದ ಬೆಳೆಸುವ ಮನೋಭಾವವನ್ನು ಪಾಲಕರು ಬೆಳೆಸಿಕೊಳ್ಳಬೇಕೆಂದೂ ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಮಾತನಾಡಿ ಜನಗಣತಿಯನ್ನು ಶಿಕ್ಷಕರು ರಾಷ್ಟ್ರಸೇವೆ ಎಂದು ತಿಳಿದು ಮಾಡಬೇಕು. ಒಂದು ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ಹತ್ತು ಮನೆಯನ್ನು ಬಿಡುವುದು ತಪ್ಪು. ಬಾಗಿಲು ಹಾಕಿದ್ದರು ಎಂದು ಬರೆದುಕೊಂಡು ಬರುವ ಪ್ರವೃತ್ತಿ ಸಲ್ಲ ಎಂದರು.
ಜನಗಣತಿಗೆ ಬಂದಾಗ ಜನರೂ ಸರಿಯಾಗಿ ಸಹಕರಿಸುವುದಿಲ್ಲ, ಜನರು ಸೂಕ್ತ ಮಾಹಿತಿ ನೀಡಿ ಜನಗಣತಿಯ ಶ್ರಮವನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು. ನಿಖರ ಮಾಹಿತಿ ದೊರೆತಾಗ ಮಾತ್ರ ಸರಕಾರ ಯೋಜನೆಗಳನ್ನು ರೂಪಿಸಲು ಸಾಧ್ಯ ಎಂಬುದನ್ನು ಜನರು ಅರಿಯಬೇಕೂ ಎಂದೂ ಅವರು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೀರಾ ಸಕ್ಷೇನಾ, ಜನಗಣತಿ ಅಧಿಕಾರಿಗಳಾದ ಬಾಂಠಿಯಾ, ನಿರ್ದೇಶನಾಲಯದ ನಿರ್ದೇಶಕ ವೇದಮೂರ್ತಿ, ಶಶಿಧರ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.