ನಂಜನಗೂಡಿನಲ್ಲಿ ಐದು ಸೆಂಟಿ ಮೀಟರ್ ಮಳೆ
ಬೆಂಗಳೂರು : ನೆರೆರಾಜ್ಯಗಳ ಮೇಲೆರಗಿರುವ ಚಂಡಮಾರುತದ ಪರಿಣಾಮವಾಗಿ ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಬೀಳುತ್ತಿದೆ. ಮೈಸೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಗುರವಾರ ಬೆಳಗ್ಗಿನಿಂದಲೂ ಮೋಡಕವಿದಿದ್ದು, ಆಗಾಗ್ಗೆ ಹಗುರದಿಂದ ಮಳೆ ಬೀಳುತ್ತಲೇ ಇದೆ.
ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾದ ಒಣಹವೆ ಇತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಯಳಂದೂರು, ನಂಜನಗೂಡುಗಳಲ್ಲಿ ತಲಾ 5 ಸೆಂಟಿ ಮೀಟರ್, ಕುಣಿಗಲ್, ಚಾಮರಾಜನಗರಗಳಲ್ಲಿ ತಲಾ 4 ಸೆಂಟಿ ಮೀಟರ್, ತಿರಮಕೂಡಲು ನರಸೀಪುರ, ಬೇಗೂರುಗಳಲ್ಲಿ ತಲಾ 3 ಸೆಂಟಿ ಮೀಟರ್ ಮಳೆ ಆಗಿದೆ.
ಮೈಸೂರು, ಕೆ.ಜಿ.ಎಫ್ಗಳಲ್ಲಿ ತಲಾ 2 ಸೆಂಟಿ ಮೀಟರ್, ಮುಳಬಾಗಲು, ಕೋಲಾರ, ಬಂಗಾರಪೇಟೆ, ಕನಕಪುರಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ. ರಾಜ್ಯದಲ್ಲಿ ಕನಿಷ್ಠ ಉಷ್ಣಾಂಶ ಉತ್ತರ ಒಳನಾಡಿನಲ್ಲಿ ಹೆಚ್ಚಾಗಿದ್ದರೆ, ಕರಾವಳಿಯಲ್ಲಿ ಸಾಮಾನ್ಯವಾಗಿತ್ತು.
ರಾಜ್ಯದಲ್ಲಿ ಕನಿಷ್ಠ ತಾಪಮಾನ ಮೈಸೂರಿನಲ್ಲಿ 15ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶನಿವಾರದವರೆಗಿನ ಮುನ್ಸೂಚನೆಯಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡು ಮತ್ತು ಕರಾವಳಿಯ ಕೆಲವುಕಡೆ ಬೀಳುವ ಸಂಭವ ಇದೆ. ಹಗುರ ಮಳೆ ಕೆಲವೆಡೆ ನಿರೀಕ್ಷಿತ.
ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಬೀಳುವ ಸೂಚನೆಗಳಿದ್ದು, ತಗ್ಗು ಪ್ರದೇಶದ ಜನರಿಗೆ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡ ಮುಸುಕಿದ ವಾತಾವರಣ ಇದ್ದು, ಪದೇ ಪದೇ ಮಳೆ ಬೀಳುವ ಸಂಭವ ಇದೆ. ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.