ಬಡವರ ರೋಗ ನಿವಾರಣೆಗೆ ವಿಶ್ವೇಶ ತೀರ್ಥಸ್ವಾಮಿಗಳ ಹೊಸ ಯೋಜನೆ
ಉಡುಪಿ : ಬಡಬಗ್ಗರ ತ್ವರಿತ ಚಿಕಿತ್ಸೆ ಮತ್ತು ಅಂಗವಿಕಲರು ಹಾಗೂ ಹಿಂದುಳಿದ ಹಳ್ಳಿಗಳ ಜನರಿಗೆ ನೆರವು ನೀಡುವಂಥ ಹೊಸ ಯೋಜನೆಯನ್ನು ಸದ್ಯದಲ್ಲೇ ಜಾರಿಗೆ ತರಲಿದ್ದೇವೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಗುರುವಾರ ತಿಳಿಸಿದ್ದಾರೆ.
‘ನಾನು ಸನ್ಯಾಸ ದೀಕ್ಷೆ ಸ್ವೀಕರಿಸಿದ 62ನೇ ವರ್ಷ ಪೂರ್ಣವಾಗುವ ಸಂದರ್ಭ, ಡಿಸೆಂಬರ್ 6ರಂದು ಯೋಜನೆ ಜಾರಿಗೆ ಬರಲಿದೆ. ಹೃದ್ರೋಗ ಚಿಕಿತ್ಸೆ, ಕಿಡ್ನಿ ತೊಂದರೆ ಹಾಗೂ ಕಣ್ಣಿನ ದೋಷಗಳಂಥ ಆರೋಗ್ಯದ ಸಮಸ್ಯೆ ಇರುವ ತೀರಾ ಬಡ ಜನರ ತ್ವರಿತ ಚಿಕಿತ್ಸೆಗೆ ಯೋಜನೆಯಡಿಯಲ್ಲಿ ನೆರವು ನೀಡಲಾಗುವುದು. ಸಹಾಯಾರ್ಥಿಗಳನ್ನು ಗುರ್ತಿಸಲು ಒಂದು ಸಮಿತಿಯನ್ನೂ ರಚಿಸಲಾಗಿದೆ’ ಎಂದು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಶಾಲೆ, ಬೀದಿ ದೀಪಗಳು ಹಾಗೂ ಕನಿಷ್ಠ ನೀರಿನ ಬಾವಿಯೂ ಇಲ್ಲದ ಹಳ್ಳಿಗಳನ್ನು ಸಮಿತಿ ಗುರ್ತಿಸಲಿದೆ. ಈ ಗ್ರಾಮ ಹಾಗೂ ಬಡ ಜನರಿಗೆ ನೆರವಾಗುವ ಯೋಜನೆಗೆ ಸ್ವಯಂ ಸೇವಾ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಬ್ಯಾಂಕ್ಗಳಿಂದ ಹಣದ ನೆರವನ್ನು ಪಡೆಯಲಾಗುವುದು ಎಂದರು.
ಜನವರಿಗೆ ರಾಜಾಂಗಣ ಸಿದ್ಧವಾಗಲಿದೆ : ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 1 ಕೋಟಿ ರುಪಾಯಿ ವೆಚ್ಚದ ‘ರಾಜಾಂಗಣ’ ಸಭಾಂಗಣ ಮುಂದಿನ ಜನವರಿ ಹೊತ್ತಿಗೆ ಪೂರ್ಣವಾಗಲಿದ್ದು, ಪ್ರಧಾನಿ ಎ.ಬಿ. ವಾಜಪೇಯಿ ಅವರನ್ನು ಅದರ ಉದ್ಘಾಟನೆಗೆ ಕರೆಯಬೇಕು ಅಂದುಕೊಂಡಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
(ಯುಎನ್ಐ)