ವಾರದೊಳಗೆ ಹೊಸ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ ಪ್ರಕಟ
* ದೀಪಾಕ್ಷಿ ಘೋಷ್
ನವದೆಹಲಿ : ಬಹು ನಿರೀಕ್ಷಿತ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ಸಂಪುಟದ ಒಪ್ಪಿಗೆ ಪಡೆದ ತಕ್ಷಣ ವಾರದೊಳಗೇ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಅನಂತಕುಮಾರ್ ಗುರುವಾರ ಹೇಳಿದ್ದಾರೆ.
ವಿಶ್ವವಿಖ್ಯಾತ ತಾಜ್ಮಹಲ್ ಸೇರಿದಂತೆ ದೇಶಾದ್ಯಂತ 33 ಸ್ಮಾರಕಗಳ ಸೌಲಭ್ಯ ಹೆಚ್ಚಿಸಲು ಹೊಸ ಪ್ರವಾಸೋದ್ಯಮ ನೀತಿಯಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಸ್ಮಾರಕಗಳ ಸೌಂದರ್ಯ ಹೆಚ್ಚಿಸುವುದು, ರಕ್ಷಣೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವುದು ಸೇರಿದೆ. ಈ ಎಲ್ಲಾ ಕೆಲಸಗಳನ್ನು ಪ್ರವಾಸೋದ್ಯಮ ನಿರ್ದೇಶನಾಲಯ ಮತ್ತು ಪ್ರಾಚ್ಯ ವಸ್ತು ಸರ್ವೇಕ್ಷಣೆ ಇಲಾಖೆಗಳು ಕೈಗೊಳ್ಳಲಿವೆ. ಪ್ರಥಮ ಹಂತದಲ್ಲಿ ಸುಲಭ್ ಇಂಟರ್ನ್ಯಾಷನಲ್ ವತಿಯಿಂದ ಉದ್ದೇಶಿತ 30 ಸ್ಮಾರಕಗಳ ಬಳಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅನಂತಕುಮಾರ್ ತಿಳಿಸಿದ್ದಾರೆ.
ಹೊಸ ನೀತಿಯನ್ನು ಮಾಹಿತಿ, ಸೇವೆ ಮತ್ತು ಸುರಕ್ಷತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದ್ದು, ದೇಶಾದ್ಯಂತ ಪ್ರವಾಸೋದ್ಯಮ ನಿಗಮದ (ಐಟಿಡಿಸಿ)ವತಿಯಿಂದ ನಡೆಯುತ್ತಿರುವ ಹೊಟೇಲ್ಗಳಲ್ಲಿನ ಬಂಡವಾಳ ಹಿಂತೆಗೆತದ ಬಗ್ಗೆಯೂ ಶೀಘ್ರವಾಗಿ ನಿರ್ಧಾರಕ್ಕೆ ಬರಲಾಗುವುದು. ನವದೆಹಲಿ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ದೇಶಾದ್ಯಂತ ಐಟಿಡಿಸಿ 361 ಹೊಟೇಲ್ಗಳನ್ನು ನಡೆಸುತ್ತಿದೆ. ಇವುಗಳನ್ನು ಖಾಸಗಿಯವರಿಗೆ ದೀರ್ಘ ಕಾಲದ ಭೋಗ್ಯಕ್ಕೆ ನೀಡಲಾಗುವುದು ಐಟಿಡಿಸಿಗೆ ಸೇರಿದ ಇತರ ಶಾಖೆಗಳನ್ನು ವಿಭಾಗಿಸಿ ಸಂಪೂರ್ಣ ಖಾಸಗೀಕರಣಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಈ ಪ್ರಸ್ತಾವನೆ ಮತ್ತು ದೇಶಾದ್ಯಂತ ಪ್ರವಾಸೋದ್ಯಮ ಸ್ಥಳಗಳಲ್ಲಿ ಸುಂಕರಹಿತ ಅಂಗಡಿಗಳನ್ನು ತೆರೆಯಲು ಗೆ ಐಟಿಡಿಸಿ ಒಪ್ಪಿಗೆ ನೀಡಿದೆ ಎಂದು ಅನಂತಕುಮಾರ್ ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧ ಮತ್ತು ಸಂಸತ್ನ ಚುನಾವಣೆಗಳು ನಡೆದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 8.6ರಷ್ಟು ವಿದೇಶಿ ಪ್ರವಾಶಿಗರ ಸಂಖ್ಯೆ ಹೆಚ್ಚಾಗಿದೆ. ವಿಮಾನ ಸೌಲಭ್ಯ ಸಾಕಾಗದೆ ಪ್ರವಾಸಿಗರು ಪರದಾಡುವಂತಾಗಿದೆ. ಪ್ರಸ್ತುತ 5. 4 ಮಿಲಿಯನ್ ವಿಮಾನದ ಟಿಕೆಟ್ಗಳು ಲಭ್ಯವಿದ್ದು, 11.6 ಮಿಲಿಯನ್ ಟಿಕೆಟ್ಗಳಿಗೆ ಬೇಡಿಕೆಯಿದೆ. ಹಾಗಾಗಿ ಏರ್ ಇಂಡಿಯಾದ ಮೇಲಿನ ಬಂಡವಾಳ ಹಿಂತೆಗೆತವನ್ನು ಸರಕಾರ ತ್ವರಿತಗೊಳಿಸಬೇಕಾದ ಅಗತ್ಯವಿದೆ ಎಂದು ಅನಂತಕುಮಾರ್ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನವನ್ನು ಪ್ರವಾಸೋದ್ಯಮದಲ್ಲಿ ಉಪಯೋಗಿಸಿಕೊಳ್ಳುವ ಬಗ್ಗೆ ಹೊಸ ನೀತಿಯಲ್ಲಿ ಹೆಚ್ಚು ಹೊತ್ತು ಕೊಡಲಾಗುವುದು ಇದರಲ್ಲಿ ವೀಸಾ ಪಡೆಯುವಲ್ಲಿ ಇರುವ ನಿಯಮಗಳನ್ನು ಸರಳಗೊಳಿಸುವುದು ಸೇರಿದಂತೆ ಅನೇಕ ಕ್ರಮ ತೆಗೆದುಕೊಳ್ಳಲಾಗುವುದು. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಮತಿ ನೀಡುವಲ್ಲಿ ಈಗಿರುವ ನಿಯಮಗಳ ಸಡಿಲಿಕೆ ಸಂಬಂಧ ಗೃಹ ಸಚಿವ ಎಲ್. ಕೆ. ಆಡ್ವಾಣಿ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅನಂತ ಕುಮಾರ್ ತಿಳಿಸಿದ್ದಾರೆ.