‘ರಾಜ್ಯಾದ್ಯಂತ ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ಸುಗ್ರೀವಾಜ್ಞೆ’
ಬೆಂಗಳೂರು : ಬೆಂಗಳೂರಿನಲ್ಲಿ ಬಹುತೇಕ ಯಶಸ್ವಿಯಾಗಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರುವ ಸಂಬಂಧ ಸುಗ್ರೀವಾಜ್ಞೆಯಾಂದನ್ನು ರಾಜ್ಯ ಸರಕಾರ ಹೊರಡಿಸಲಿದೆ. ಈ ವಿಷಯವನ್ನು ನಗರಾಭಿವೃದ್ಧಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ತಿಳಿಸಿದ್ದಾರೆ.
ಹಿಂದುಳಿದ ವರ್ಗದ ಜನರಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಸರಕಾರ 9 ಕೋಟಿ ರುಪಾಯಿ ಯೋಜನೆಯನ್ನೂ ಜಾರಿಗೆ ತರುತ್ತಿದೆ ಎಂದು ಅವರು ಹೇಳಿದರು. ಕರಾವಳಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ 707 ಕೋಟಿ ರುಪಾಯಿಗಳ ಸಮಗ್ರ ಯೋಜನೆಯಾಂದನ್ನು ಸರಕಾರ ಕೈಗೆತ್ತಿಕೊಳ್ಳುತ್ತಿದೆ ಎಂದ ಅವರು, ಈ ಯೋಜನೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಧನಸಹಾಯ ಮಾಡಲಿದೆ ಎಂದು ತಿಳಿಸಿದರು.
ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದ ನೂರು ಪಟ್ಟಣಗಳಿಗೆ ನೀರು ಪೂರೈಸಲು ಗೃಹ ಮತ್ತು ನಗರಾಭಿವೃದ್ಧಿ ನಿಗಮ 300 ಕೋಟಿ ರುಪಾಯಿಗಳನ್ನು ಮಂಜೂರು ಮಾಡಿದೆ. ಲಭ್ಯವಿರುವ ಜಲ ಸಂಪನ್ಮೂಲವನ್ನು ಬಳಸಿಕೊಂಡು ಕುಡಿವ ನೀರಿನ ಸಮರ್ಪಕ ಪೂರೈಕೆಯ ಅನುಷ್ಠಾನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ - ಸೂಚನೆ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿ ಕಾರ್ಯನಿರ್ವಹಿಸುವುದು ಎಂದರು.
ಆಕ್ಟ್ರಾಯ್ ಪದ್ಧತಿ ಜಾರಿಗೆ ತರುವ ವಿಷಯವನ್ನು ಅಲ್ಲಗಳೆದ ಸಚಿವರು, ಸರಕಾರವು ಪರಿಣಾಮಕಾರಿಯಾಗಿ ಆಸ್ತಿ ತೆರಿಗೆಯ ಸಂಗ್ರಹಣೆಯತ್ತ ಹೆಚ್ಚು ಗಮನ ಹರಿಸಲಿದೆ ಎಂದೂ ಹೇಳಿದರು. (ಯುಎನ್ಐ)