ಬೆಂಗಳೂರಲ್ಲಿ ರೌಡಿ ಪ್ರತಿಬಂಧಕ ದಳ ಅಸ್ತಿತ್ವಕ್ಕೆ
ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಮತ್ತೆ ರೌಡಿ ಪ್ರತಿಬಂಧಕ ದಳ ಅಸ್ತಿತ್ವಕ್ಕೆ ಬಂದಿದೆ. ನಗರದ ಐದು ವಲಯಗಳಲ್ಲಿ ಪುನಾರಚಿಸಲಾಗಿರುವ ಈ ದಳಕ್ಕೆ ಜಂಟಿ ಪೊಲೀಸ್ ಆಯುಕ್ತ ಅಜಯ್ಕುಮಾರ್ ಸಿಂಗ್ ಮುಖ್ಯಸ್ಥರಾಗಿರುತ್ತಾರೆ.
ಬೆಂಗಳೂರಿನ ಐದು ವಲಯಗಳಲ್ಲಿ ಪ್ರತ್ಯೇಕವಾಗಿ ರಚಿಸಲಾಗಿರುವ ಈ ದಳ ತಲಾ ಒಬ್ಬರು ಸಹಾಯಕ ಪೊಲೀಸ್ ಆಯುಕ್ತರು, ಇಬ್ಬರು ಇನ್ಸ್ಪೆಕ್ಟರ್ಗಳು ಹಾಗೂ ಸಬ್ ಇನ್ಸ್ಪೆಕ್ಟರ್ಗನ್ನು ಒಳಗೊಂಡಿರುತ್ತದೆ. ಈ ಅಧಿಕಾರಿಗಳು ತಮ್ಮ ನಿತ್ಯದ ಕೆಲಸ ಕಾರ್ಯಗಳ ಜತೆಗೆ ಹೆಚ್ಚುವರಿಯಾಗಿ ಈ ಕಾರ್ಯ ನಿರ್ವಹಿಸಲಿದ್ದಾರೆ.
ನಗರದಲ್ಲಿ ಪತ್ತೆಯಾಗದೆ ಬಾಕಿ ಉಳಿದಿರುವ ಕೊಲೆ, ಸುಲಿಗೆ, ದರೋಡೆಯೇ ಮೊದಲಾದ ಪ್ರಕರಣಗಳ ಬಗ್ಗೆ ದಳ ತನಿಖೆ ನಡೆಸುವುದಲ್ಲದೆ, ಗೂಂಡಾಗಿರಿಯನ್ನು ಮೂಲೋತ್ಪಾಟನೆ ಮಾಡಲು ಶ್ರಮಿಸುವುದು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಲಯಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ದಳಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಒಂದೆಡೆ ಕಲೆತು ಸಮಾಲೋಚನೆ ನಡೆಸುವುದಲ್ಲದೆ, ತಮ್ಮ ವಲಯಗಳ ವ್ಯಾಪ್ತಿಯಲ್ಲಿ ಬರುವ ರೌಡಿಗಳ ಮೇಲೆ ತೀವ್ರ ನಿಗಾ ವಹಿಸುವರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮೂಲಗಳು ತಿಳಿಸಿವೆ.