ನಾಗಪ್ಪ ಮಾರಡಗಿ ನ್ಯಾಯಾಲಯಕ್ಕೆ ಹಾಜರು
ಬೆಂಗಳೂರು : ವೀರಪ್ಪನ್ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದ ನಾಗಪ್ಪ ಮಾರಡಗಿ ಕೊನೆಗೂ ಗುರುವಾರ ರಾಜ್ಯ ಹೈಕೋರ್ಟ್ ಮುಂದೆ ಹಾಜರಾಗಿದ್ದಾರೆ. ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಅವರು ನಾಗಪ್ಪ ಅವರ ಹೇಳಿಕೆ ಕೇಳಿದ ಬಳಿಕ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
ಹೊಟ್ಟೆ ಪಕ್ಷದ ರಂಗಸ್ವಾಮಿ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನಾಗಪ್ಪ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಗಪ್ಪ ಅವರು ಈವರೆಗೆ ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಗೃಹ ಬಂಧನದಲ್ಲಿದ್ದರು ಎಂದು ಶಂಕಿಸಲಾಗಿದೆ.
ಧಾರವಾಡ ವರದಿ : ರಾಜ್ಕುಮಾರ್ ಅಪಹರಣವಾದ ದಿನದಿಂದಲೂ ರಾಜ್ರೊಂದಿಗೆ ಒತ್ತೆಯಾಳಾಗಿದ್ದ ನಾಗಪ್ಪ ಮಾರಡಗಿಯನ್ನು ಒಮ್ಮೆಯೂ ನೋಡಲಾಗದಿರುವ ಬಗ್ಗೆ ಮಾರಡಗಿ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.
ರಾಜ್ಕುಮಾರ್ ಬಿಡುಗಡೆಯಾಗಿ 15 ದಿನ ಕಳೆಯುತ್ತಾ ಬಂದಿದ್ದರೂ ನಾಗಪ್ಪ ಒಂದರ್ಥದಲ್ಲಿ ಬಂಧಿಯಾಗಿರುವ ಬಗ್ಗೆ ಇವರಿಗೆಲ್ಲಾ ವ್ಯಥೆಯಾಗಿದೆ. ವೀರಪ್ಪನ್ ತೆಕ್ಕಿಯಿಂದ ತಪ್ಪಿಸಿಕೊಂಡು ಬಂದ ನಾಗಪ್ಪನ ವೀರಗಾಥೆಯನ್ನು ಅವನ ಬಾಯಿಯಿಂದಲೇ ಕೇಳುವ ತವಕ ಗ್ರಾಮಸ್ಥರಿಗೆ. ಆತ ತಪ್ಪಿಸಿಕೊಂಡು ಬಂದು ತಿಂಗಳುಗಳೇ ಕಳೆದಿದ್ದರೂ ನಾಗಪ್ಪ ಇನ್ನೂ ಒಮ್ಮೆಯೂ ತನ್ನ ತವರಿಗೆ ಬಂದಿಲ್ಲ.
ನಾನು ಮಗನ ಕಣ್ತುಂಬಾ ನೋಡಿ ಅದೆಷ್ಟು ದಿನ ಆಯಿತ್ರೀ. ಆತ ಯಾವಾಗ ನಮ್ಮನ್ನ ಕಾಣಕ್ಕ ಬರ್ತಾನಂತಾ ಕಾದು ಕೂತಿವ್ರೀ ಎನ್ನುತ್ತಾರೆ ನಾಗಪ್ಪನ ಪಾಲಕರು. ಗುರುವಾರ ರಾಜ್ಯ ಹೈಕೋರ್ಟ್ ಮುಂದೆ ಹಾಜರಾದ ಮೇಲಾದರೂ ನಾಗಪ್ಪ ತಮ್ಮೂರಿಗೆ ಬರುತ್ತಾನೆಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ.