ಶೂ ಧರಿಸಿ ಗಾಯತ್ರಿ ಮಂತ್ರ : ಬಚ್ಚನ್ ವಿರುದ್ಧ ಪಂಡಿತರ ಆಕ್ರೋಶ
ಲಖನೌ : ಸ್ಟಾರ್ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಮನೆಮಾತಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಈಗ ಮತ್ತೊಂದು ರೀತಿಯಲ್ಲಿ ಸುದ್ದಿ ಮಾಡಿದ್ದಾರಲ್ಲದೆ, ಕೆಲವರ ಆಕ್ರೋಶಕ್ಕೂ ಕಾರಣರಾಗಿದ್ದಾರೆ.
ಮೊಹಬತೇನ್ ಚಿತ್ರದ ದೃಶ್ಯವೊಂದರಲ್ಲಿ ಅಮಿತಾಬ್ ಬಚ್ಚನ್ ಕಾಲಿಗೆ ಶೂ ಧರಿಸಿ ಪವಿತ್ರವಾದ ಗಾಯತ್ರಿ ಮಂತ್ರ ಪಠಿಸಿದ್ದಾರೆ ಎಂಬುದು ಕಾಶಿ ಪಂಡಿತರುಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೂಟು ಧರಿಸಿ ಬಚ್ಚನ್ ತಪ್ಪು ತಪ್ಪಾಗಿ ಗಾಯತ್ರಿ ಮಂತ್ರ ಜಪ ಮಾಡಿದ್ದರು ಎಂದು ಈಗಾಗಲೇ ಶಿವಸೇನೆಯ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು.
ಬಚ್ಚನ್ ತಾವು ಗಾಯತ್ರಿ ಮಂತ್ರ ಪಠಿಸುವ ಆ ದೃಶ್ಯದಲ್ಲಿ ಪಾದರಕ್ಷೆ ಧರಿಸಿರಲಿಲ್ಲ. ತಮಗೆ ಧರ್ಮ ಹಾಗೂ ದೇವರ ಬಗ್ಗೆ ಅಪಾರ ಗೌರವವಿದೆ ಎಂದು ಸಮಜಾಯಿಸಿ ನೀಡಿದ್ದರೂ ಕಾಶಿ ವಿಶ್ವೇಶ್ವರ ದೇವಸ್ಥಾನ ಸಮಿತಿ, ವಾರಾಣಸಿಯ ವೇದ ಪಾರಾಯಣ ಕೇಂದ್ರ ಹಾಗೂ ಕಾಶಿ ಸಂಸ್ಕೃತ ರಕ್ಷಾ ಸಂಘರ್ಷ ಸಮಿತಿ ಆಕ್ರೋಶ ಕಡಿಮೆಯಾಗಿಲ್ಲ.
ಚಿತ್ರದಿಂದ ಸಂಪೂರ್ಣವಾಗಿ ಈ ದೃಶ್ಯವನ್ನು ತೆಗೆದುಹಾಕದಿದ್ದರೆ ಉಗ್ರ ಹೋರಾಟ ನಡೆಸುವ ಬೆದರಿಕೆಯನ್ನೂ ಅವರು ಹಾಕಿದ್ದಾರೆ. ಮಿಗಿಲಾಗಿ ಗಾಯತ್ರಿ ಮಂತ್ರಕ್ಕೆ ಬಚ್ಚನ್ರಿಂದ ಆಗಿರುವ ಅಪಮಾನದ ಪ್ರಾಯಶ್ಚಿತ್ತಾರ್ಥವಾಗಿ ಡಿಸೆಂಬರ್ 9ರಂದು ಗಾಯತ್ರಿ ಯಾಗ ಕೈಗೊಳ್ಳಲೂ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ಮಧ್ಯೆ ಹಿಂದೂಗಳ ಪ್ರತಿರೋಧಕ್ಕೆ ಹೆದರಿ ಕೆಲವು ಚಿತ್ರಮಂದಿರಗಳಲ್ಲಿ ಈ ದೃಶ್ಯವನ್ನು ಈಗಾಗಲೇ ತೆಗೆದು ಹಾಕಲಾಗಿದೆಯಂತೆ.
ಋಣಮುಕ್ತ ಕರೋಡ್ಪತಿ : ಈ ಮಧ್ಯೆ ಅಮಿತಾಬ್ ಬಚ್ಚನ್ ಅವರು ಕೆನರಾ ಬ್ಯಾಂಕ್ಗೆ ತಾವು ಪಾವತಿಸ ಬೇಕಾಗಿದ್ದ 10 ಕೋಟಿ ರುಪಾಯಿಗಳನ್ನು ಪಾವತಿ ಮಾಡಿದ್ದಾರೆ. ಕೆನರಾ ಬ್ಯಾಂಕ್ 10 ಕೋಟಿ ರುಪಾಯಿಗಳ ಸಾಲ ವಸೂಲಿಗೆ ಬಚ್ಚನ್ರ ಎಬಿಸಿಎಲ್ವಿರುದ್ಧ ದಾವೆ ಹೂಡಿತ್ತು. ದೀರ್ಘ ಕಾಲದ ಕಾನೂನು ಸಮರದ ನಂತರ ಈಗ ಬಚ್ಚನ್ ಋಣಮುಕ್ತರಾಗಿದ್ದಾರೆ.
ಬ್ಯಾಂಕ್ ಈಗ ಬಚ್ಚನ್ ಸಂಸ್ಥೆ ವಿರುದ್ಧ ಹೂಡಿದ್ದ ದಾವೆಯನ್ನು ಹಿಂತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಮಿತಾಬ್ರ ಪ್ರತೀಕ್ಷಾ ಬಂಗಲೆ ಮುಟ್ಟು ಗೋಲು ಆದೇಶ ರದ್ದಾಗಿದೆ ಎಂದು ಎಬಿಸಿಎಲ್ ವಕೀಲ ನಿಶೀತ್ ಧ್ರುವ ತಿಳಿಸಿದ್ದಾರೆ.