ಮುಂಬೈ ಕನ್ನಡ ಸಂಘದಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮುಂಬಯಿ : ಇಲ್ಲಿನ ಮಾತುಂಗ ಪ್ರದೇಶದಲ್ಲಿರುವ ಕರ್ನಾಟಕ ಸಂಘ ಪ್ರತಿವರ್ಷ ಕೊಡಮಾಡುವ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ. ಕನ್ನಡ ಮರಾಠಿ ಭಾಷೆಯ ಸಾಹಿತ್ಯ, ಸಾಂಸ್ಕೃತಿಕ ಸೌಹಾರ್ದ ಮತ್ತು ಬಾಂಧವ್ಯ ಸಮೃದ್ಧಗೊಳಿಸುವಲ್ಲಿ ರಚನಾತ್ಮಕ ಸಾಧನೆ ಮಾಡಿದ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಇಂತಹ ಪ್ರಶಸ್ತಿಗಳನ್ನು ಸಂಘ ನೀಡುತ್ತಾ ಬಂದಿದೆ.
ಸಂಘದ ಮಾಜಿ ಅಧ್ಯಕ್ಷ ದಿ. ವರದರಾಜ ಅದ್ಯ ಅವರ ಹೆಸರಿನಲ್ಲಿ ಹಾಗೂ ಅವರ ಸಂಸ್ಮರಣಾರ್ಥ 1989ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಪ್ರಶಸ್ತಿಯು 10 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ವ್ಯಕ್ತಿ ಅಥವಾ ಸಂಸ್ಥೆಯ ಹಿಂದಿನ ಎರಡು ವರ್ಷಗಳ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 2000 ಸಾಲಿನ ಪ್ರಶಸ್ತಿಗಾಗಿ 1998 ಮತ್ತು 99ರ ಸಾಲಿನಲ್ಲಿ ಮೇಲ್ಕಂಡ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಲಾಗುತ್ತದೆ.
ಆಸಕ್ತರು ಬಿಳಿಯ ಕಾಗದದಲ್ಲಿ ತಮ್ಮ ವಿವರಗಳನ್ನು ಬರೆದು ಅದಕ್ಕೆ ಪೂರಕವಾದ ದಾಖಲೆಗಳನ್ನು ಒಳಗೊಂಡ ಅರ್ಜಿಯಾಂದಿಗೆ ಡಿಸೆಂಬರ್ 31ರೊಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಟಿ.ಎಚ್. ಕಥಾರಿಯಾ ಮಾರ್ಗ್, ಮೊಗಲ್ ಲೇನ್, ಮಾತುಂಗ ರಸ್ತೆ, ಮಹಿಮ್, ಮುಂಬಯಿ - 400 016. ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ.