ಪಾಸ್ವಾನ್ರಿಂದ ದಳ ಹೋಳು : ನಾಲ್ವರು ಸದಸ್ಯರ ಜನಶಕ್ತಿ ಅಸ್ತಿತ್ವಕ್ಕೆ
ನವದೆಹಲಿ : ಅನೇಕ ತಿಂಗಳುಗಳಿಂದ ಪಕ್ಷದೊಳಗೆ ನಡೆಯುತ್ತಿದ್ದ ಕುದಿಜಗಳ ಭಾನುವಾರ ಸ್ಫೋಟಗೊಂಡಿದ್ದು, ಸಂಯುಕ್ತ ಜನತಾದಳ ಭಾನುವಾರ ಇಬ್ಭಾಗವಾಯಿತು. ರಾಮ್ವಿಲಾಸ್ ಪಾಸ್ವಾನ್ ಬೆಂಬಲಿಗರಾದ ನಾಲ್ವರು ಸದಸ್ಯರು ತಮಗೆ ಪ್ರತ್ಯೇಕ ಆಸನಗಳನ್ನು ನೀಡುವಂತೆ ರಾತ್ರಿ ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಲೋಕಸಭಾಧ್ಯಕ್ಷ ಜಿ.ಎಂ. ಸಿ. ಬಾಲಯೋಗಿ ಅವರನ್ನು ಭೇಟಿ ಮಾಡಿದ ಪಾಸ್ವಾನ್ ಅವರು ತಮ್ಮ ಬೆಂಬಲಿಗರ ಪಟ್ಟಿಯನ್ನು ಅವರಿಗೆ ಸಲ್ಲಿಸಿದರು. ಬೆಂಬಲಿಗರ ಪಟ್ಟಿಯಲ್ಲಿ ಪಾಸ್ವಾನ್ ಅವರ ಸಹೋದರ ರಾಮಚಂದ್ರ, ಜೈ ನಾರಾಯಣ್ ನಿಶಾದ್ ಹಾಗೂ ರಾಮಕೃಷ್ಣ ಹೆಗಡೆ ಅವರ ಕಟ್ಟಾ ಬೆಂಬಲಿಗರೆಂದು ಗುರ್ತಿಸಿಕೊಂಡಿದ್ದ ರಮೇಶ್ ಜಿಗಜಿಗಣಿ ಸೇರಿದ್ದಾರೆ. ತಮ್ಮ ಹೊಸ ಪಕ್ಷವನ್ನು ಜನಶಕ್ತಿ ಎಂದು ಗುರ್ತಿಸುವಂತೆ ಪಾಸ್ವಾನ್ ಅವರು ಬಾಲಯೋಗಿ ಅವರಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಭಾನುವಾರ ಬೆಳಿಗ್ಗೆ ನಡೆದ ಸಂಯುಕ್ತ ಜನತಾದಳದ ಸಭೆಗೆ ಪಾಸ್ವಾನ್ ಅವರು ಗೈರುಹಾಜರಾಗಿದ್ದರು. ಸಭೆಯಲ್ಲಿ ಹಿರಿಯ ನಾಯಕರಾದ ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಸೇರಿದಂತೆ 22 ರಾಜ್ಯಘಟಕಗಳ ಅಧ್ಯಕ್ಷರು ಹಾಗೂ 30ಕ್ಕೂ ಹೆಚ್ಚು ಸಂಸದರು ಪಾಲ್ಗೊಂಡಿದ್ದರು.
ಅಧ್ಯಕ್ಷರ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ಪಾಸ್ವಾನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಆದರೆ, ಸಭೆ ಮುಂದುವರಿದಿರುವುದರಿಂದ ಈ ಬಗ್ಗೆ ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ರಘುಪತಿ ಹೇಳಿದರು.
(ಇನ್ಫೋ ವಾರ್ತೆ)