ಮಂತ್ರಾಲಯ ಮೂಲ ಮಠದ ಸರ್ವಾಧಿಕಾರಿ ನೇಮಕ ರದ್ದು
ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮಠದ ಉನ್ನತ ಪದವಿಗಳಲ್ಲಿ ಒಂದಾದ ಸರ್ವಾಧಿಕಾರಿ ಹುದ್ದೆಗೆ ಮಾಡಲಾಗಿದ್ದ ನೇಮಕವನ್ನು ಆಂಧ್ರಪ್ರದೇಶ ಸರಕಾರ ರದ್ದು ಮಾಡಿದೆ. ಈ ಹುದ್ದೆಗೆ ಯಾವುದೇ ಅನುಭವ ಇಲ್ಲದ ರಾಜಗೋಪಾಲ್ ಎನ್ನುವವರನ್ನು ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಮಠದ ಪೀಠದಲ್ಲಿರುವ ಶ್ರೀ ಸುಶಮೀಂದ್ರ ತೀರ್ಥ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ಪುತ್ರ ರಾಜಗೋಪಾಲ್ರನ್ನು ಸರ್ವಾಧಿಕಾರಿ ಹುದ್ದೆಗೆ 18ರಂದು ನೇಮಕ ಮಾಡಿದ್ದರು. ಕೋಟ್ಯಂತರ ರುಪಾಯಿ ವ್ಯವಹಾರ ಹೊಂದಿರುವ ಮಠಕ್ಕೆ ರಾಜಗೋಪಾಲ್ರನ್ನು ನೇಮಿಸಿದ್ದು ಭಕ್ತರಿಗೆ ಆಶ್ಚರ್ಯ ತಂದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳೂ ಪ್ರಕಟವಾಗಿದ್ದವು.
ಶ್ರೀಗಳಿಗೆ ಮಠಕ್ಕೆ ಸರ್ವಾಧಿಕಾರಿಯನ್ನು ನೇಮಿಸುವ ಅಧಿಕಾರ ಇದೆಯಾದರೂ, ಯಾವುದೇ ಅನುಭವ, ವಿದ್ಯೆ ಇಲ್ಲದ ಅದೂ, ಬ್ಯಾಂಕ್ ಒಂದರಲ್ಲಿ ಅಟೆಂಡರ್ ಆಗಿದ್ದ 30 ವರ್ಷ ವಯಸ್ಸಿನ ತಮ್ಮ ಪುತ್ರನನ್ನೇ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೂ ಮುನ್ನ ಮೂರು ತಿಂಗಳವರೆಗೆ ಯಾರನ್ನೂ ಮಠದ ಸರ್ವಾಧಿಕಾರಿ ಹುದ್ದೆಗೆ ನೇಮಿಸುವುದಿಲ್ಲ ಎಂದು ಸ್ವತಃ ಶ್ರೀಗಳು ತಿರುಪತಿಯಲ್ಲಿರುವ ಮುಜರಾಯಿ ಇಲಾಖೆಯ ಜಂಟಿ ಆಯುಕ್ತ ಪ್ರೇಂಕುಮಾರ್ ಅವರಿಗೆ ಪತ್ರ ಬರೆದುಕೊಟ್ಟಿದ್ದರು.
ಹೀಗಿದ್ದೂ ಮಠಕ್ಕೆ ರಾಜಗೋಪಾಲ್ರನ್ನು ನೇಮಿಸಿದ ಬಗ್ಗೆ ಬಂದ ವರದಿಗಳ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಕೃಷ್ಣಾರೆಡ್ಡಿ, ಸಹಾಯಕ ಆಯುಕ್ತರಾದ ರಾಮಮೂರ್ತಿ ಎನ್ನುವವರು ಮಂತ್ರಾಲಯಕ್ಕೆ ಆಗಮಿಸಿ, ನೇಮಕಾನಂತರದ ಬೆಳವಣಿಗೆಗಳ ವಿವರ ಸಂಗ್ರಹಿಸಿದ್ದು, ಕ್ಷೇತ್ರದ ಪರಿಚಯವೇ ಇಲ್ಲದ ರಾಜಗೋಪಾಲ್ ನೇಮಕದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶ್ರೀಗಳು ನೇಮಕ ಆದೇಶ ವಾಪಸ್ಸು ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...