ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೃದಂಗ ಮೂರ್ತಿಗೆ ‘ಚೌಡಯ್ಯ’, ಸಾಹಿತಿ ಬಸವರಾಜುಗೆ ‘ಪಂಪ’
ಬೆಂಗಳೂರು : ಸಾಹಿತಿ ಡಾ.ಎಲ್. ಬಸವರಾಜು, ನಾಟಕಕಾರ ಎಚ್.ಎನ್.ಹೂಗಾರ, ನೃತ್ಯ ಕಲಾವಿದ ಕೆ.ಮುರಳಿಧರ ರಾವ್, ಮೃದಂಗ ವಾದಕ ಕೆ.ಟಿ.ಮೂರ್ತಿ ನಿಮಗೆಲ್ಲರಿಗೂ ಅಭಿನಂದನೆಗಳು.
ಪ್ರಸಕ್ತ ಸಾಲಿನ ಸಾಹಿತ್ಯ, ಕಲೆ- ಸಂಗೀತ ಹಾಗೂ ನಾಟ್ಯ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರ ಈ ಹಿರಿಯರನ್ನು ಆಯ್ದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಸೋಮವಾರ ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಮೃದಂಗ ವಾದಕ ಕೆ.ಟಿ.ಮೂರ್ತಿ ಅವರಿಗೆ ಚೌಡಯ್ಯ, ಡಾ.ಎಲ್. ಬಸವರಾಜು ಅವರಿಗೆ ಪಂಪ, ಎಚ್.ಎನ್.ಹೂಗಾರ ಅವರಿಗೆ ಗುಬ್ಬಿ ವೀರಣ್ಣ ಹಾಗೂ ಕೆ.ಮುರಳಿಧರ ರಾವ್ ಅವರಿಗೆ ಶಾಂತಲಾ ಪ್ರಶಸ್ತಿ ಲಭಿಸಲಿವೆ. ಪ್ರಶಸ್ತಿಗಳ ನಗದು- ಪುರಸ್ಕಾರಗಳ ವಿವರ ಇಂತಿದೆ...
- ಚೌಡಯ್ಯ ಪ್ರಶಸ್ತಿ : 1.5 ಲಕ್ಷ ರುಪಾಯಿ, ಕಂಚಿನ ವಿಗ್ರಹ ಮತ್ತು ತಾಮ್ರ ಪತ್ರ
- ಗುಬ್ಬಿ ವೀರಣ್ಣ- ಪಂಪ- ಶಾಂತಲಾ ಪ್ರಶಸ್ತಿ : 1 ಲಕ್ಷ ರುಪಾಯಿ, ಕಂಚಿನ ವಿಗ್ರಹ ಮತ್ತು ತಾಮ್ರ ಪತ್ರ
ಪ್ರಶಸ್ತಿಗೆ ಆಯ್ಕೆಯಾದವರ ಸಂಕ್ಷಿಪ್ತ ಪರಿಚಯ
- ಟಿ.ಕೆ.ಮೂರ್ತಿ : ಮೃದಂಗ ವಿದ್ವಾಂಸ. ತಂಜಾವೂರು ವೈದ್ಯನಾಥ್ ಅಯ್ಯರ್ ಅವರ ಶಿಷ್ಯ. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿ ವಿಜೇತರು.
- ಎಚ್.ಎನ್.ಹೂಗಾರ : 68ರ ಪ್ರಾಯದ ಇವರು ವೃತ್ತಿರಂಗಭೂಮಿಯಲ್ಲಿ ಹೆಸರು ಮಾಡಿದವರು. ಚಿಕ್ಕಂದಿನಿಂದಲೇ ನಾಟಕ ಜಗತ್ತಿಗೆ ಕಾಲಿಟ್ಟ ಇವರನ್ನು ಅನೇಕರು ಜ್ಯೂಬಿಲಿ ಕವಿ ಎಂದು ಕರೆಯುತ್ತಾರೆ. 1985ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
- ಕೆ.ಮುರಳಿಧರ ರಾವ್ : ನೃತ್ಯದಲ್ಲಿ ಹೆಸರು ಮಾಡಿರುವ 66 ವಯಸ್ಸಿನ ರಾವ್ ಅವರಿಗೆ 1989-90ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಕಲಾ ತಿಲಕ ಎಂಬ ಬಿರುದು ಸಂದಿವೆ.
- ಡಾ.ಎಲ್.ಬಸವರಾಜು : ಹುಟ್ಟಿದ್ದು 1919 ರಲ್ಲಿ, ಕೋಲಾರ ಜಿಲ್ಲೆಯಲ್ಲಿ . 40ಕ್ಕೂ ಹೆಚ್ಚು ಕೃತಿಗಳ ಕರ್ತೃ. ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 3 ದಶಕಗಳ ಸೇವೆ. ಅಧ್ಯಾಪಕ, ರೀಡರ್, ಪ್ರೊಫೆಸರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಾವಿರಾರು ಅಭಿಮಾನಿ ವಿದ್ಯಾರ್ಥಿಗಳನ್ನು ಪಡೆದಿದ್ದಾರೆ. ಗ್ರಂಥ ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಬಸವರಾಜು ಅವರದ್ದು ಎತ್ತರದ ಸಾಧನೆ. ಅಲ್ಲಮನ ವಚನ ಚಂದ್ರಿಕೆ, ಶೂನ್ಯ ಸಂಪಾದನೆ ಅವರ ಕೆಲವು ಪ್ರಮುಖ ಕೃತಿಗಳು. ಭಾರತೀಯ ಕಾವ್ಯ ಮೀಮಾಂಸೆಯನ್ನು ಸರಳ ಕನ್ನಡದಲ್ಲಿ ಅರ್ಥೈಸಿದ್ದಾರೆ. ಮೈಸೂರು ವಿವಿ ಡಿ.ಲಿಟ್ ಪದವಿ ನೀಡುವ ಮೂಲಕ ಅವರನ್ನು ಗೌರವಿಸಿದೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, November 21, 2000, 5:30 [IST]