ಮೌನದ ಹೆಜ್ಜೆ ಜಾಡಲ್ಲಿ ಎತ್ತಿನ ಗಾಡಿಯಾಟ
ಮಳೆಗಾಲ ಮುಗಿದು ತಿಂಗಳೊಂದು ಕಳೆದ ನಂತರ ಅತಿವೃಷ್ಟಿ ಪರಿಹಾರದ ಮಾತುಕತೆಗಳು ಕೇಳಿಬರುತ್ತಿದ್ದು , ಆದಷ್ಟು ಹೆಚ್ಚು ಹಣ ಗಿಟ್ಟಿಸಿಕೊಳ್ಳಲು ವಿಧಾನ ಸಭೆಯಲ್ಲಿ ಗಲಾಟೆ ನಡೆಯುತ್ತಿದೆ. ನಡುವೆ ರಾಜ್ ಕುಮಾರ್ ಬಂದು, ಸಂಭ್ರಮ ಶುಭಾಶಯಗಳ ಸಾಲುಗಳು ತೇಲಿದವು. ಮತ್ತೆ ವೀರಪ್ಪನ್ನ್ನು ಹಿಡಿಯಿರಿ ಎಂದು ಕೆಲವರು ತಮ್ಮ ಬತ್ತಳಿಕೆಯ ರಾಕೆಟ್ ಎಸೆದರು. ಆದರೂ ಪರಿಹಾರದ ನೂಲು ಹಿಡಿದು ಜಗ್ಗುವುದು ಮರೆಯಾಗಿಲ್ಲ. ಯಾಕೆಂದರೆ ಕಾಸು ಕೈಗೆ ಬರುವುದು ಇದೇ ವಿಷಯದಲ್ಲಿ .
ಎಲ್ಲಿ ಮನೆ ಕಳೆದುಕೊಂಡವರು ಹಣ ಪಡೆಯುತ್ತಾರೋ... ಮತ್ತೆ ಕಡಲ ಅಲೆಗಳ ಅಬ್ಬರದಲ್ಲಿ ಕರಗಿರುವ ಗೋಡೆಗಳಿಗೆ ಬಲ ನೀಡುವ ಕಾರ್ಯ ಶುರುವಾಗುತ್ತದೋ... ಮತ್ತೆ ಯಾರಿಗೆ ಪುನರ್ವಸತಿ ಬ್ಯಾನರ್ ಕೆಳಗೆ ಸುಣ್ಣದ ಹೊಸ ಮನೆ ಸಿಗುತ್ತದೋ... ಅಂತೆಲ್ಲ ಗೊತ್ತಾಗುವುದು ಈ ಕಲಾಪಗಳು ಮುಗಿದು ದುಡ್ಡಿಗಾಗಿ ಸಂತ್ರಸ್ತರು ಗ್ರಾಮ ಪಂಚಾಯತ್ಗೆ ಓಡಾಡಿದಾಗ.
ಕಳೆದರೆಡು ದಿನಗಳ ನಂತರ ರಾಜ್ ಕುಮಾರ್ ಆಗಮನದ ಖುಷಿಯೀಗ ಜೋರು ಮಳೆ ನಂತರದ ಅರ್ಥಪೂರ್ಣ ನಿಶ್ಯಬ್ದದಂತಿದೆ. ಗದ್ದಲಕ್ಕಿಂತ ಮೌನವಾಗಿ ಅನುಭವಿಸುವುದೇ ಹೆಚ್ಚು ಖುಷಿ ಎಂದು ಕನ್ನಡಿಗರು ತಿಳಿದಿರಬೇಕು. ಈ ಮೌನದ ಸಂವಹನಕ್ಕೆ ರಾಜ್ಯದ ತಣ್ಣನೆ ಗಾಳಿಯ ಹವೆಯೂ ಕೈ ಗೂಡಿಸಿದೆ. ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ 15.4 ಡಿ.ಸೆಂ. ಅಷ್ಟಿತ್ತು . ಅದು ರಾಜ್ಯದ ಮಟ್ಟಿಗೆ ಕನಿಷ್ಠ ತಾಪಮಾನ. ಕರಾವಳಿ ಹಾಗೂ ಒಳನಾಡುಗಳಲ್ಲೂ ಉಷ್ಣತೆ ಕುಸಿದಿತ್ತು . ತಣ್ಣನೆಯ ಮಂದ ಗಾಳಿ. ಗಂಟಲಿನಲ್ಲಿ ಕೆರೆತ ತರುವಂಥಾ ಥಂಡಿ.
ಮುಂದಿನ ಎರಡು ದಿನಗಳಲ್ಲೂ ಬಿಸಿಲು- ಮಳೆಯ ಎತ್ತಿನ ಗಾಡಿಯ ಆಟ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚದುರಿದಂತೆ ದಕ್ಷಿಣ ಒಳನಾಡಿನಲ್ಲಿ ತುಂತುರು ಉದುರಿದರೂ ಉದುರಬಹುದು. ಉಳಿದಂತೆ ಒಣಹವೆ. ವಾರದ ರಜೆ ಮಜವಾಗಿ ಕಳೆಯಲು ಹೇಳಿ ಮಾಡಿಸಿದ ಕಾಲ. ನೀವು ಪುರುಸೊತ್ತಿಲ್ಲದ ಜನವಾದರೆ.. ಸಾರಿ.