ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ರನ್ನು ವೀರಪ್ಪನ್ ಯಾವ ನಂಬಿಕೆ ಮೇಲೆ ಬಿಡುಗಡೆ ಮಾಡಿದ?
ಚೆನ್ನೈ : ಕಾನೂನಿನ ತೊಡಕುಗಳನ್ನು ಬಗೆ ಹರಿಸಿ ಮೈಸೂರು ಜೈಲಿನಲ್ಲಿರುವ 51 ಟಾಡಾ ಬಂಧಿಗಳು ಹಾಗೂ ತಮಿಳುನಾಡು ಜೈಲಿನಲ್ಲಿರುವ ಐವರು ಉಗ್ರರನ್ನು ಬಿಡುಗಡೆ ಮಾಡುವ ಭರವಸೆಯನ್ನು ತಾವು ಹಾಗೂ ತಮ್ಮ ತಂಡ ಕೊಟ್ಟಿರುವುದರಿಂದಲೇ ರಾಜ್ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿರುವುದು ಎಂದು ತಮಿಳು ದೇಶೀಯ ಇಯಕ್ಕಂ ನಾಯಕ ಪಿ.ನೆಡುಮಾರನ್ ಶುಕ್ರವಾರ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನೆಡುಮಾರನ್ ಮಾತಿನ ಪ್ರಮುಖ ತುಣುಕುಗಳು ಇಂತಿವೆ....
- ರಾಜ್ ಅಪಹರಣದಲ್ಲಿ ಎಲ್ಟಿಟಿಇ ಕೈವಾಡ ಇಲ್ಲವೇ ಇಲ್ಲ.
- ಟಿಎಂಸಿ ನಾಯಕ ಎಸ್.ಬಾಲಕೃಷ್ಣನ್ ಆರೋಪದಿಂದ ಬೇಸತ್ತ ನಾನು ಸಂಧಾನಕ್ಕೆ ಒಪ್ಪದಿದ್ದಾಗ, ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಸಂಧಾನಯಾತ್ರೆ ಕೈಗೊಳ್ಳುವಂತೆ ಖುದ್ದು ನನ್ನಲ್ಲಿ ಮನವಿ ಮಾಡಿಕೊಂಡರು. ರಾಜ್ ಬಿಡುಗಡೆಯಾದ ನಂತರ ಫೋನಾಯಿಸಿ ನನಗೆ ಶುಭವನ್ನೂ ಕೋರಿದರು.
- ರಾಜ್ ಬಿಡುಗಡೆ ಮಾನವೀಯತೆಯಿಂದ ಮಾತ್ರ ಸಾಧ್ಯವಾಗಿದೆ. ಒತ್ತೆಯಾಳುಗಳಿಗೆ ಯಾವುದೇ ರೀತಿ ಕಿರುಕುಳ ಕೊಡದ ವೀರಪ್ಪನ್ನಲ್ಲೂ ಮಾನವೀಯತೆ ಇದೆ ಅನ್ನುವುದರಲ್ಲಿ ಅನುಮಾನವಿಲ್ಲ.
- ರಾಜ್ ಬಿಡುಗಡೆ ಬದಲಿಗೆ ಹಣ- ಶಸ್ತ್ರಾಸ್ತ್ರ ಯಾವುದೂ ವೀರಪ್ಪನ್ಗೆ ಸರಬರಾಜಾಗಿಲ್ಲ.
- ಕಾವೇರಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕೋರಿದ್ದ ವೀರಪ್ಪನ್ಗೆ, ಈಗಾಗಲೇ 6.5 ಕೋಟಿ ರುಪಾಯಿ ಪರಿಹಾರ ನೀಡಲಾಗಿದೆ. ಇನ್ನೂ 1000 ಅರ್ಜಿಗಳು ಕರ್ನಾಟಕ ಸರ್ಕಾರದ ಮುಂದಿದ್ದು ಅವನ್ನು ಪರಿಶೀಲಿಸಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟೆ.
- ಎಸ್ಟಿಎಫ್ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಉಭಯ ಸರ್ಕಾರಗಳೂ ತಲಾ 5 ಕೋಟಿ ರುಪಾಯಿ ಹಾಕಿ ಪರಿಹಾರ ನಿಧಿ ಸ್ಥಾಪಿಸಿರುವುದು, 51 ಟಾಡಾ ಬಂಧಿಗಳ ವಿಚಾರಣೆಗೆ ಕರ್ನಾಟಕ ಸರ್ಕಾರ ವಿಶೇಷ ನ್ಯಾಯಾಧೀಶರನ್ನು ನೇಮಿಸಿರುವುದನ್ನೂ ವೀರಪ್ಪನ್ಗೆ ವಿವರಿಸಿದೆ.
- ಸುಪ್ರಿಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 26ರಂದು ವಿವಿಧ ತಮಿಳು ಸಂಘಟನೆಗಳು ಸಭೆ ನಡೆಸಿ, ನಂತರ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಒಂದು ಮನವಿ ಪತ್ರ ಸಲ್ಲಿಸಲಿದ್ದೇವೆ.
- ಕೊನೆಯ ಸಂಧಾನಯಾತ್ರೆಯಲ್ಲಿ ನಕ್ಕೀರನ್ ಗೋಪಾಲ್ ಸೂಕ್ತ ಸಮಯದಲ್ಲಿ ನಮ್ಮನ್ನು ಬಂದು ಸೇರಲಾಗಲಿಲ್ಲ. ಆದರೆ ನಾವು ವಾಪಸ್ಸಾದ ನಂತರ ಅವರೂ ನಮ್ಮೊಂದಿಗೆ ಸೇರಿಕೊಂಡರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ
Comments
Story first published: Friday, November 17, 2000, 5:30 [IST]