ನಾಗಪ್ಪ ಅವರನ್ನು ಹುಡುಕಿ ಕೊಟ್ಟವರಿಗೆ ಕೋಟಿ ಬಹುಮಾನ !
ಬೆಂಗಳೂರು : ನಾಗಪ್ಪ ನೇನೋ ಓಡಿ ಬಂದ. ತಗುಲಿ ಹಾಕಿಕೊಂಡವರು ನಾವು ಎಂದು ಗುರುವಾರ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ರಾಜ್ ಹೇಳುತ್ತಿದ್ದಾಗ, ಮಾಧ್ಯಮದ ಕಣ್ಣುಗಳು ಹುಡುಕಿದ್ದು ನಾಗಪ್ಪನನ್ನು. ಆತ ಅಲ್ಲಿರಲಿಲ್ಲ .
ವೀರಪ್ಪನ್ ಅಡಗುತಾಣದಿಂದ ಓಡಿ ಬಂದ ಮಾರನೆ ದಿನವೇ ನಿಗೂಢವಾಗಿ ಕಣ್ಮರೆಯಾದ ನಾಗಪ್ಪ , ರಾಜ್ ವಾಪಸ್ಸಾದರೂ ಪತ್ತೆಯಾಗಿಲ್ಲ . ರಾಜ್ ಬೆಂಗಳೂರಿಗೆ ಬಂದ ಸಂದರ್ಭದಲ್ಲಾದರೂ, ನಾಗಪ್ಪ ತನ್ನ ಅಜ್ಞಾತವಾಸದಿಂದ ಹೊರಗೆ ಬರಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ರಾಜ್ ಜೊತೆಯಲ್ಲಿ ನಾಗೇಶ್ ಮತ್ತು ಗೋವಿಂದರಾಜ್ ಕಾಣಿಸಿಕೊಂಡರೂ, ನಾಗಪ್ಪನ ಸುಳಿವೇ ಇರಲಿಲ್ಲ .
ನಾಗಪ್ಪ ಇರುವುದಾದರೂ ಎಲ್ಲಿ ? ಅವರ ಅಜ್ಞಾತವಾಸಕ್ಕೆ ಕಾರಣಗಳೇನು? ಅವರು ಓಡಿ ಬಂದ ಕ್ಷಣದಿಂದ ರಾಜ್ ಕುಟುಂಬ ವಿಚಿತ್ರ ಮೌನಕ್ಕೆ ಜೋತು ಬಿದ್ದುದೇಕೆ? ಮುಂತಾದ ವಿಷಯಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ . ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಗಪ್ಪ ನಂತರ ಇದ್ದಕ್ಕಿದ್ದಂತೇ ಕಣ್ಮರೆಯಾದರು.
ನಾಗಪ್ಪ ಓಡಿಬಂದ ವಿಷಯದ ಬಗ್ಗೆ ಸತ್ಯಾಂಶಗಳನ್ನು ರಾಜ್ಯದ ಜನತೆಗೆ ತಿಳಿಸಲು ಕೋರ್ಟ್ ಮುಂದೆ ಹಾಜರಾಗುವಂತೆ ಹೈಕೋರ್ಟ್ ಆದೇಶ ಹೊರಡಿಸಿದರೂ, ಅದನ್ನು ನಾಗಪ್ಪ ಪಡೆಯಲೇ ಇಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರು, ತಾವೇ ಖುದ್ದಾಗಿ ಕೋರ್ಟ್ ಆದೇಶವನ್ನು ತಲುಪಿಸಲು ನಾಗಪ್ಪನವರ ಮನೆಗೆ ಎಡತಾಕಿದರೂ ಪ್ರಯೋಜನವಾಗಲಿಲ್ಲ .
ನಾಗಪ್ಪನವರ ವಿಚಿತ್ರ ಕಣ್ಮರೆ ನಾಡಿನ ಜನತೆಯ ಕುತೂಹಲ ಕೆರಳಿಸಿದೆ. ವೀರಪ್ಪನ್ ಅಪಹರಿಸಿದ್ದ ನಾಲ್ವರು ಒತ್ತೆಯಾಳುಗಳಲ್ಲಿ ರಾಜ್ ಸೇರಿದಂತೆ ಎಲ್ಲರೂ ಬಿಡುಗಡೆಯಾಗಿದ್ದಾರೆ. ಆದರೆ, ಬಿಡುಗಡೆಯಾಗಿದ್ದರೂ ನಾಗಪ್ಪ ಸಾರ್ವಜನಿಕ ಬದುಕಿನಿಂದ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗಪ್ಪನ ಸೆರೆವಾಸ ಇನ್ನೂ ಮುಗಿದಿಲ್ಲ .
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ