Get Updates
Get notified of breaking news, exclusive insights, and must-see stories!

ಎಂಥಾ ತಮಾಷೆ! ಎಂಥಾ ನಾಟಕ ! ಯಾರು ತೆಗೆಯುತ್ತೀರಿ ಸಿನಿಮಾ?

* ಹಿಂದೋಲ್‌ ಸೇನ್‌ ಗುಪ್ತಾ

ನವ ದೆಹಲಿ : ರಾಜ್‌ ವಾಪಸ್ಸಾತಿಗಾಗಿ ಅಭಿಮಾನಿಗಳು ಬಸ್ಸು, ಟೈರು ಸುಟ್ಟರು. ಉದ್ವೇಗದ ಪ್ರತಿಭಟನೆಗಳನ್ನು ನಡೆಸಿದರು. ಅಂಗಲಾಚಿ ದೇವರನ್ನು ಬೇಡಿಕೊಂಡರು. ಯಾವ ಕಾರಣಕ್ಕೋ ಅಂತೂ ರಾಜ್‌ ಕಾಡಿನಿಂದ ನಾಡಿಗೆ ವಾಪಸ್ಸು ಬಂದಿದ್ದಾರೆ.

ಕನ್ನಡದ ಪ್ರಖ್ಯಾತ ಸಿನಿಮಾ ನಟ ಹಾಗೂ ಕಾಡುಗಳ್ಳ ವೀರಪ್ಪನ್‌ ಒಳಗೊಂಡ ಅಪಹರಣ ಪ್ರಕರಣ, ವಿವಿಧ ರೀತಿಗಳಲ್ಲಿ ಕುತೂಹಲ ಹಾಗೂ ಮಹತ್ವ ಅನ್ನಿಸುತ್ತದೆ. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರುವ ನಾಯಕ ನಟ, ತನ್ನ ಸಿನಿಮಾದ ಪಾತ್ರದಂಥ ವ್ಯಕ್ತಿಯ ಕೈಯ್ಯಲ್ಲಿ ಸಿಲುಕಿದ್ದು ನಿಜ ಬದುಕು ಹಾಗೂ ಸಿನಿಮಾ ಬದುಕಿನ ಮುಖಾಮುಖಿಯಂತೆ ಕಾಣುತ್ತದೆ. ಅಂತೆಯೇ ರಾಜ್‌ರಿಗೆ ಸಿನಿಮಾ ಬದುಕು ಹಾಗೂ ವಾಸ್ತವದ ಬದುಕಿನ ನಡುವಿನ ಗೆರೆಯಂತೆ ವೀರಪ್ಪನ್‌ ಕಂಡಿರಲೂ ಬಹುದು. ಅಪಹರಣ ಮತ್ತು ಬಿಡುಗಡೆ ಒಂದು ನಾಟಕದಂತೆ. ಯಾರಾದರೊಬ್ಬರು ಈ ಘಟನೆಗಳಿಂದ ಪ್ರೇರೇಪಿತರಾಗಿ ಸಿನಿಮಾ ತೆಗೆಯಬಹುದು ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಂಬಯಿಯ ಓ. ಚೌಧುರಿ ಹೇಳುತ್ತಾರೆ.

ರಾಜ್‌ಕುಮಾರ್‌ ಯಾರು? ಈತನಿಗೆ ಯಾಕಿಷ್ಟು ಪ್ರಾಮುಖ್ಯತೆ?

ನಾನೇ ರಾಜ್‌ಕುಮಾರ್‌. ನನ್ನನ್ನು ಕರೆದೊಯ್ಯಿರಿ, ಯಾರಿಗೂ ತೊಂದರೆ ಮಾಡಬೇಡಿ. ಬಂದೂಕು ಹಿಡಿದು ಎದುರಿಗೆ ನಿಂತು ಪ್ರಶ್ನಿಸಿದ ವೀರಪ್ಪನ್‌ಗೆ ರಾಜ್‌ ಶಾಂತವಾಗಿಯೇ ಉತ್ತರಿಸಿದರು. ಅವರ ಉತ್ತರದಲ್ಲಿ ಹೀರೋ ಸ್ಟೈಲ್‌ ಇತ್ತು , 210 ಸಿನಿಮಾಗಳ ಮೂಲಕ ಲಕ್ಷಾಂತರ ಹೃದಯಗಳ ಗೆದ್ದ ನಾಯಕನ ನಡವಳಿಕೆಯಲ್ಲಿ ಇತರರನ್ನು ದುಷ್ಟ ಶಕ್ತಿಯಿಂದ ರಕ್ಷಿಸುವ ಸಜ್ಜನಿಕೆಯಿತ್ತು .

ಅಣ್ಣಾವ್ರ ಅಪಹರಣವಾಗಿದೆ ಎಂದು ವಾಹಿನಿಗಳೂ ಸೇರಿದಂತೆ ಎಲ್ಲಾ ಮಾಧ್ಯಮಗಳು ಕೆಂಪಕ್ಷರಗಳ ಮಿಂಚಿನ ಸುದ್ದಿ ಹಾಕುತ್ತಿದ್ದಂತೆಯೇ, ರಾಷ್ಟ್ರದ ಅನೇಕ ಭಾಗಗಳ ಜನರ ಮನಸ್ಸುಗಳಲ್ಲಿ ಎದ್ದದ್ದು ಅದೇ ಪ್ರಶ್ನೆ - ಯಾರೀ ರಾಜ್‌ಕುಮಾರ್‌? ಈತನಿಗೆ ಯಾಕಿಷ್ಟು ಪ್ರಾಮುಖ್ಯತೆ? ಉತ್ತರ ಸಿಕ್ಕುವ ಮುನ್ನವೇ, ಪ್ರಾದೇಶಿಕ ಸುದ್ದಿ ವಿಶ್ವಾದ್ಯಂತ ಹಬ್ಬಿತ್ತು .

ಇತ್ತ ಕರ್ನಾಟಕದಲ್ಲಿ - ಸಾವಿರಾರು ಅಭಿಮಾನಿಗಳು ಅಕ್ಷರಶಃ ಹುಚ್ಚೆದ್ದರು. ರಸ್ತೆಗಳಿಗೆ ತಡೆ ಒಡ್ಡಲಾಯಿತು. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಪರಿಣಾಮವಾಗಿ ಕಣ್ಣ ನೀರನ್ನು ಇಂಗಿಸಿಕೊಂಡು ರಾಜ್‌ ಪತ್ನಿ ಪಾರ್ವತಮ್ಮ ಹಾಗೂ ಮಕ್ಕಳು ಪದೇಪದೇ ಶಾಂತಿ ಕಾಪಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಬೇಕಾಯಿತು.

ಆಮೇಲೆ, ಅಡಗುತಾಣದಿಂದ ವೀರಪ್ಪನ್‌ ಬೇಡಿಕೆಗಳು ಕ್ಯಾಸೆಟ್‌ಗಳಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಲುಪಿದವು. ವಿವಿಧ ಜೈಲುಗಳಲ್ಲಿರುವ ಬಂಧಿಗಳ ಬಿಡುಗಡೆಗೆ ನರಹಂತಕ ಪಟ್ಟು ಹಿಡಿದ. ಈ ಹೊತ್ತಿನಲ್ಲಿ ಶುರುವಾದದ್ದು ನಕ್ಕೀರನ್‌ ಗೋಪಾಲ್‌ ಅವರ ಸಾಲು ಸಂಧಾನ ಯಾತ್ರೆಗಳು. ಗೋಪಾಲ್‌ಗೆ ವೀರಪ್ಪನ್‌ ಹಾಗೂ ಕಾಡು ಹೊಸದೇನೂ ಆಗಿರಲಿಲ್ಲ .

ರಜಾ ದಿನಗಳು ಖುಷಿಯಾಗಿವೆ, ಆತನ ಬೇಡಿಕೆಗಳೇನೋ ಈಡೇರಿಸಿ

ಕಾಡಿನಿಂದ ರಾಜ್‌ ಕಳಿಸಿದ ಕ್ಯಾಸೆಟ್‌ನಲ್ಲಿನ ಮಾತುಗಳು ಕುತೂಹಲ ಹುಟ್ಟಿಸುವಂತಿದ್ದವು. ಆತನ ಬೇಡಿಕೆಗಳೇನೋ ಈಡೇರಿಸಿ ಬಿಡಿ. ನನ್ನ ರಜಾ ದಿನಗಳನ್ನು ಕಾಡಿನಲ್ಲಿ ಖುಷಿಯಾಗಿ ಕಳೆಯುತ್ತಿದ್ದೇನೆ. ಮುಂತಾಗಿ ರಾಜ್‌ ಹೇಳಿದ್ದರು. ಆ ಮಾತುಗಳೆಲ್ಲಾ ಸಿನಿಮಾ ಮಾತಿನಂತಿವೆ ಎಂದು ಕೆಲವರು ಗೊಣಗಿಕೊಂಡರು. ನೂರಾರು ಜನರನ್ನು, ಸಾವಿರಾರು ಆನೆಗಳನ್ನು ಕೊಂದ ವೀರಪ್ಪನನ್ನು ರಾಜ್‌ ಒಳ್ಳೆಯವನು ಅಂದಿದ್ದರು.

ಗೋಪಾಲ್‌ರ ಸಂಧಾನ ಯಾತ್ರೆಗಳು, ದಂಡಯಾತ್ರೆಗಳಾಗಿ ಬದಲಾಗುತ್ತಿದ್ದಂತೆ ಮಾಧ್ಯಮಗಳಿಗೂ ಬೋರಾಗತೊಡಗಿತು. ಅಭಿಮಾನಿಗಳು ಒತ್ತಡದಲ್ಲಿ ಕುದಿಯತೊಡಗಿದರು. ಆಗ, ವೀರಪ್ಪನ್‌ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸತೊಡಗಿತು. ಆದರೆ, ಒಬ್ಬ ನಿವೃತ್ತ ಪೊಲೀಸ್‌ ಅಧಿಕಾರಿ ಸರ್ಕಾರದ ಪ್ರಯತ್ನಗಳನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿದರು. ಉಭಯ ರಾಜ್ಯಗಳಿಗೆ ಛೀಮಾರಿ ಹಾಕಿದ ಕೋರ್ಟ್‌, ಟಾಡಾ ಬಂಧಿಗಳ ಬಿಡುಗಡೆಗೆ ಅನುಮತಿ ನೀಡಲು ನಿರಾಕರಿಸಿತು.

ಸುಪ್ರಿಂಕೋರ್ಟ್‌ನ ತೀರ್ಮಾನದಿಂದಾಗಿ, ರಾಜ್‌ ಬಿಡುಗಡೆಯ ವಿಷಯ ಕಗ್ಗಂಟಾಗಿ ಸರ್ಕಾರಗಳು ತಲೆ ಮೇಲೆ ಕೈ ಹೊತ್ತು ಕಂಗಾಲಾಗಿರುವಾಗ, ಒಮ್ಮೆಗೇ ಥೇಟ್‌ ಸಿನಿಮಾ ಶೈಲಿಯಲ್ಲಿ ರಾಜ್‌ ಬಿಡುಗಡೆಯಾಗಿದೆ ಅನ್ನುವ ಸುದ್ದಿ ಬರುತ್ತದೆ. ಮತ್ತೆ ಕೆಂಪಕ್ಷರದ ಫ್ಲಾಶ್‌ಗಳು ಮಾಧ್ಯಮಗಳಲ್ಲಿ ಬದಲಾಗುತ್ತವೆ. ಅಭಿಮಾನಿಗಳು ಮತ್ತೆ ಹುಚ್ಚಾಗುತ್ತಾರೆ, ಉದ್ವೇಗಗೊಳ್ಳುತ್ತಾರೆ. ನೂಕು ನುಗ್ಗಲು, ಒಂದೆರಡು ವಾಹನಗಳಿಗೆ ಕಲ್ಲೆಸೆತದ ಘಟನೆಗಳೂ ಅನಿವಾರ್ಯ ಅನ್ನುವಂತೆ ನಡೆದವು. ಅಣ್ಣಾವ್ರನ್ನ ನೋಡಲು ಬಂದ ಮುದುಕಿಯಾಬ್ಬರು ಪರ್ಸು ಕಳೆದುಕೊಂಡು, ಚಾರ್ಜಿಗಾಗಿ ಪೊಲೀಸ್‌ ಪೇದೆ ಮುಂದೆ ಕೈಯ್ಯಾಡ್ಡುತ್ತಾರೆ. 109 ದಿನಗಳಿಂದ ಹೈರಾಣಾಗಿದ್ದ ಪೋಲೀಸರಿಗೆ 110 ನೇ ದಿನವೂ ಮತ್ತೆ ನಿದ್ದೆಯಿಲ್ಲದೆ ದಣಿಯುತ್ತಾರೆ. ಆ ದಣಿವಿನಲ್ಲಿ ಎಲ್ಲಾ ಮುಗಿಯಿತಲ್ಲ ಅನ್ನುವ ಸಮಾಧಾನ ಕಾಣುತ್ತದೆ. ಸಿನಿಮಾ ನೋಡಿ, ನೂಕು ನುಗ್ಗಲಿನಲ್ಲಿ ಮಂದಿರದಿಂದ ಹೊರಬರುವ ಅಭಿಮಾನಿಯ ಪರಿಸ್ಥಿತಿ ಅಲ್ಲಿಯದು.

ಅತ್ತ ಮತ್ತೊಂದು ಧ್ರುವದಷ್ಟು ದೂರದ ದೆಹಲಿಯಲ್ಲಿ , ಕಾಲೇಜು ವಿದ್ಯಾರ್ಥಿನಿ ಪ್ರಿಯಾಂಕ ಶರ್ಮ- ನಾಯಕನ ಬಿಡುಗಡೆಗೆ ಸಂಭ್ರಮಿಸುತ್ತಿರುವ ಸಾವಿರಾರು ಅಭಿಮಾನಿಗಳ ಘೋಷಣೆಗಳನ್ನು ದೂರದರ್ಶನದಲ್ಲಿ ಕಂಡು- ಎಂಥಾ ತಮಾಷೆ, ಅಂತೂ ಇಂತೂ ಅವರು ಬಿಡುಗಡೆ ಆದರು ಅನ್ನುತ್ತಾಳೆ.

(ಐಎಎನ್‌ಎಸ್‌)

ಮುಖಪುಟ / ರಾಜ್‌ ಬಿಡುಗಡೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+