ರಾಜ್ ಬಿಡುಗಡೆಯ ಹಿಂದಿನ ಶಕ್ತಿದೇವತೆ ‘ಭಾನು’
*ಎಂ.ಕೆ. ಮಧುಸೂದನ್
ಬೆಂಗಳೂರು : ರಾಜ್ ಬಿಡುಗಡೆಯಲ್ಲಿ ಹೆಣ್ಣು ಮಗಳೊಬ್ಬಳ ಪಾತ್ರ ಇದೆಯಂತೆ ಎಂದು ಹಬ್ಬಿದ್ದ ಸುದ್ದಿಗಳಿಗೆ ಗುರುವಾರ ಉತ್ತರ ಸಿಕ್ಕಿದೆ. ಆಕೆ ಡಾ. ಭಾನು. ವಿಧಾನಸೌಧದಲ್ಲಿ ನಡೆದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್, ಡಾ. ಭಾನು ಅವರನ್ನು ಪರಿಚಯಿಸುವವರೆಗೆ ಆಕೆ ಯಾರು? ಏನು ? ಹೇಗೆ ?ಎಂಬ ಅನೇಕ ಉಹಾಪೋಹದ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿರಲಿಲ್ಲ.
ವೃತ್ತಿಯಲ್ಲಿ ಆಯುರ್ವೇದ ವೈದ್ಯೆಯಾಗಿರುವ ಭಾನು ಗ್ರಾನೈಟ್ ಉದ್ಯಮಿ. ಈರೋಡ್ ಹತ್ತಿರ ಇವರ ಗ್ರಾನೈಟ್ ಕ್ವಾರಿಗಳಿವೆ. ಭಾನು ಅವರ ಜೊತೆ ಗ್ರಾನೈಟ್ ನಡೆಸುತ್ತಿರುವ ಕರ್ನಾಟಕದ ಮಾಜಿ ಪೊಲೀಸ್ ಮಹಾ ನಿರ್ದೇಶಕ ರಾಮಲಿಂಗಮ್ ಅವರ ಪುತ್ರ ರಾಂ ಕುಮಾರ್ ಹಾಗೂ ತಮಿಳು ಸಂಘದ ಷಣ್ಮುಗ ಸುಂದರಂ ಅವರ ಪುತ್ರ ಮಣಿ ನೆಡುಮಾರನ್ ಸೂಚನೆಯಂತೆ ಕಾಡಿಗೆ ತೆರಳಿದ್ದರು.
ರಾಜ್ ಬಿಡುಗಡೆ ವಿಷಯದಲ್ಲಿ ಪಟ್ಟು ಹಿಡಿದ ವೀರಪ್ಪನ್ ಮನವೊಲಿಸಲು ನೆಡುಮಾರನ್ ಹೂಡಿದ ತಂತ್ರ ಫಲಿಸಿದ್ದೇ 109 ದಿನಗಳ ವನವಾಸಕ್ಕೆ ಅಂತ್ಯ ಸಿಗಲು ಕಾರಣವಾಯಿತು. ತಮ್ಮ ಆರೋಗ್ಯ ಗಂಭೀರವಾಗಿ ಹದಗೆಟ್ಟಿದೆ ಎಂದು ನಾಟಕವಾಡುವಂತೆ ತಿಳಿಸಿದ ನೆಡುಮಾರನ್ ಅವರ ಸೂಚನೆಯಂತೆ ರಾಜ್ ಗಂಭೀರವಾಗಿ ವರ್ತಿಸಿದರು. ಇದರಿಂದ ಕಂಗಾಲಾದ ವೀರಪ್ಪನ್ ರಾಜ್ಗೆ ಚಿಕಿತ್ಸೆ ಕೊಡಿಸಲು ನಂಬಿಕಸ್ತ ಡಾಕ್ಟರ್ ಒಬ್ಬರನ್ನು ಕರೆಸಬೇಕೆಂದು ನೆಡುಮಾರನ್ ಸಹಾಯ ಕೇಳಿದ. ಈ ಹಂತದಲ್ಲಿ ನೆಡುಮಾರನ್ ತಮ್ಮ ಸಂಬಂಧಿ ರಾಮ್ಕುಮಾರ್ ಮೂಲಕ ಭಾನು ಅವರನ್ನು ಕರೆಸಿಕೊಂಡರು.
ಈ ಸಂಬಂಧ ನೆಡುಮಾರನ್ ಸೂಚನೆಯಂತೆ ಕಾರ್ಯತಂತ್ರ ರೂಪಿಸಿದ ಭಾನು ಮತ್ತು ಅವರ ಇಬ್ಬರು ಸಹಚರರು ರಾಜ್ ಅವರ ಆರೋಗ್ಯ ಗಂಭೀರವಾಗಿದ್ದು ಅವರ ಹೃದಯದ ಬಡಿತ ಕಡಿಮೆಯಾಗುತ್ತಿದೆ. ಇನ್ನು ಹೆಚ್ಚು ದಿನ ಅವರು ಇಲ್ಲಿದ್ದರೆ ಅಪಾಯ ಎಂದು ವೀರಪ್ಪನ್ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆತ ರಾಜ್ರನ್ನು ಬಿಡಲು ಒಪ್ಪಿದ. ರಾಜ್ ಅವರಿಗೆ ಕೆಲವು ಪ್ರಾಥಮಿಕ ಮಟ್ಟದ ಚಿಕಿತ್ಸೆ ನೀಡಿದ ನಂತರ, ವೀರಪ್ಪನ್ ಮತ್ತು ಆತನ ಕೆಲವು ಸಹಚರರಿಗೂ ಚಿಕಿತ್ಸೆ ನೀಡಿದರು.
(ಐಎಎನ್ಎಸ್)
ಮುಖಪುಟ / ರಾಜ್ ಬಿಡುಗಡೆ