ಕಾಸರಗೋಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ನಿರ್ಧಾರ
ಕಾಸರಗೋಡು : ಮುಂದಿನ ಐದು ವರ್ಷದೊಳಗೆ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಿಸಲು ಕೇರಳ ಪ್ರಾಂತದ ಕನ್ನಡ ಅಧ್ಯಾಪಕರ ಸಂಘ ನಿರ್ಧರಿಸಿದೆ.
ಇಲ್ಲಿನ ಜೆಯುಪಿ ಶಾಲೆಯಲ್ಲಿ ಬುಧವಾರ ನಡೆದ ಕೇರಳ ಪ್ರಾಂತ ಕನ್ನಡ ಅಧ್ಯಾಪಕರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರೊ. ವಾಸುದೇವ ಚಾಪಡಿ ಇವರು ನೀಡಿದ 11 ಸಾವಿರ ರುಪಾಯಿಗಳ ದೇಣಿಗೆಯಲ್ಲಿ 10 ಸಾವಿರ ರುಪಾಯಿಗಳ ನಿಧಿ ಸ್ಥಾಪಿಸಲಾಗಿದೆ. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಹೆಚ್ಚು ಅಂಕ ಪಡೆಯುವ ವಿಧ್ಯಾರ್ಥಿಗೆ ಕಾಸರಗೋಡು ಕನ್ನಡ ವಿದ್ಯಾರ್ಥಿ ಬಹುಮಾನ ನೀಡಲು ಸಭೆ ನಿರ್ಧರಿಸಿದೆ. ಬಹುಮಾನ ವಿತರಣೆ ಈ ವರ್ಷವೇ ಆರಂಭವಾಗಲಿದೆ.
ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಿಗಾಗಿ ಬರುವ ವರ್ಷ ಕಮ್ಮಟ ಹಮ್ಮಿಕೊಳ್ಳಲು ತೀರ್ಮಾನಿಸಿದ ಸಭೆ, ಕನ್ನಡ ನೌಕರರ ಪ್ರಥಮ ಸಭೆಯ ಸಿದ್ಧತೆಗಾಗಿ ಎಸ್. ಕೆ. ಮೋಹನದಾಸ್ ಅವರ ನೇತೃತ್ವದಲ್ಲಿ ಸಮಿತಿ ನೇಮಿಸಿದೆ.
ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳ ಹೆಚ್ಚಿನ ಸವಲತ್ತುಗಳಿಗಾಗಿ ಕರ್ನಾಟಕದ ಮುಖ್ಯಮಂತ್ರಿ ಮತ್ತು ಇತರ ಸಚಿವರನ್ನು ಭೇಟಿ ಮಾಡಲು ಶಿಷ್ಟ ಮಂಡಳಿ ರಚನೆ, ಲೇಖಕ ಹಾಮಾನಾ ನಿಧನಕ್ಕೆ ಸಂತಾಪ ಸಲ್ಲಿಸಿದ ಸಭೆ, ಕಮ್ಮಟಕ್ಕಾಗಿ ಮತ್ತು ಇತರ ಕೆಲವು ಯೋಜನೆಗಳ ಉಪಸಮಿತಿಗಳನ್ನು ರಚಿಸಿತು.
ಪದಾಧಿಕಾರಿಗಳ ಆಯ್ಕೆ : ಕೇಂದ್ರ ಸಮಿತಿಗೆ ನಾಲ್ಕು ವರ್ಷಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಕಾಸರಗೋಡು ಸರಕಾರಿ ಕಲಾ ಕಾಲೇಜಿನ ಕೆ. ಕಮಲಾಕ್ಷ ಅವರನ್ನು ಗೌರವ ಅಧ್ಯಕ್ಷರನ್ನಾಗಿ, ಬೇಕೂರು ಜಿಎಚ್ಎಸ್ನ ಸಿ. ರಾಛವ ಬಲ್ಲಾಳ್ ಅವರನ್ನು ಅಧ್ಯಕ್ಷರನ್ನಾಗಿ, ಪೆರ್ಲ ಎಸ್ಎನ್ಎಚ್ಎಸ್ನ ವಿ.ಬಿ. ಕುಳಮರ್ವಾ ಅವರನ್ನು ಉಪಾಧ್ಯಕ್ಷರನ್ನಾಗಿ, ವೋಗ್ರಾಲ್ ಪುತ್ತೂರು ಶಾಲೆಯ ಒ. ಲೀಲಾವತಿ ಅವರು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.