ಕರಾವಳಿ ಪ್ರವಾಸೋದ್ಯಮ ರಚನೆಪರಿಶೀಲನೆಗೆ ಟಾಸ್ಕ್ ಫೋರ್ಸ್
ಉಡುಪಿ : ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ (ಸಿಟಿಡಿಎ) ಸ್ಥಾಪನೆಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಕಾರ್ಯ ಪಡೆ ರಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವ ಅನಂತಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿವರೆಗೆ ಒಂದೆಡೆ ಸುಂದರವಾದ ಸಾಗರ ತೀರ, ಮತ್ತೊಂದೆಡೆ ಕಣ್ಣು ಕೋರೈಸುವಷ್ಟು ಹಸಿರು ಕಾಡುಗಳು ತುಂಬಿವೆ. ಪ್ರವಾಸೋದ್ಯಮಕ್ಕೆ ಬೇಕಾದ ಅಗತ್ಯ ನೈಸರ್ಗಿಕ ಸಂಪನ್ಮೂಲಗಳು ಅಲ್ಲಿವೆ. ಅಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕಷ್ಟೆ ಎಂದರು.
ಕಾರ್ಯಪಡೆಯಲ್ಲಿ ರಾಜ್ಯ ಹಾಗೂ ಕೇಂದ್ರದ ಪ್ರತಿನಿಧಿಗಳು, ಪ್ರವಾಸೋದ್ಯಮ ಪರಿಣತರು ಇರುತ್ತಾರೆ. ಸಿಟಿಡಿಎ ರಚಿಸಲು ಅಗತ್ಯ ವಿಷಯಗಳ ಕುರಿತು ಕಾರ್ಯಪಡೆ ಪರಿಶೀಲಿಸಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯದವರನ್ನೂ ತೊಡಗಿಸಿಕೊಳ್ಳಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಅನಂತಕುಮಾರ್ ಹೇಳಿದರು.
ಕನಕ ಸಂಸ್ಕೃತ ಸಭಾ ಮಂಟಪ, ಕನಕ ಸ್ಮಾರಕಗಳ ಸ್ಥಾಪನೆಗೆ 50 ಲಕ್ಷ ರುಪಾಯಿ ಹಾಗೂ ಕನಕದಾಸರ ಜನ್ಮಸ್ಥಳವಾದ ಕಾಗಿನೆಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ 50 ಲಕ್ಷ ರುಪಾಯಿ ಮಂಜೂರು ಮಾಡಲು ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪ್ರಸ್ತಾವಿಸಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕುರಿತ ರಾಜ್ಯ ಸರ್ಕಾರದ ವರದಿಗೆ ಕೇಂದ್ರ ಸರ್ಕಾರ ಇದಿರು ನೋಡುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪಿಲಿಕುಳ ಪಕ್ಷಿಧಾಮ ಮತ್ತು ಉಳ್ಳಾಲ ಕಡಲ ತೀರಗಳ ಅಭಿವೃದ್ಧಿ, ಮಲ್ಪೆ ಹಾಗೂ ಮರವಂತೆ ಕಡಲ ತೀರಗಳಲ್ಲಿ ಝಗಮಗ ದೀಪಾಲಂಕಾರ ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ 3.25 ಲಕ್ಷ ರುಪಾಯಿ ಬಿಡುಗಡೆ ಮಾಡಿದ್ದು, ಅದನ್ನು ರಾಜ್ಯ ಸರ್ಕಾರ ಸಂಪೂರ್ಣ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು.
(ಯುಎನ್ಐ)